ಟೈಮ್ ಸೆನ್ಸು – ನಾನ್ ಸೆನ್ಸು

ನಮ್ಮ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕದ ಪಾಠ ಹೇಳಿಕೊಡುವಾಗ ಅಲ್ಲೊಂದ್ ಇಲ್ಲೊಂದ್ ದಿನಗಳಲ್ಲಿ ಅವರಿಗೆ ಕೆಲಸಕ್ಕೆ ಬರೋ ಕೆಲವು ವಿಚಾರ ಚರ್ಚೆಗೆ ಬರುತ್ತವೆ.ಅವರು ಒಳ್ಳೆಯ ಮೂಡಲ್ಲಿದ್ದು ಆಸಕ್ತರಾಗಿ ಕೇಳುವಾಗ ಒಳ್ಳೆಯ ಉದಾಹರಣೆ, ಅನುಭವಗಳೂ ಹತ್ತಾರು ವಿಷಯಗಳೂ ಹಂಚಿಕೊಳ್ಳುವುದೂ ಉಂಟು. ಒಳ್ಳೆಯ ಮೂಡ್ನಲ್ಲಿ ಇದ್ದಾಗ ಮಕ್ಕಳಿಗೆ ತಿಳಿಹಾಸ್ಯದ ಚಟಾಕೆಯನ್ನೂ ಹಂಚಿಕೊಳ್ಳುವ ಪ್ರಮೇಯ ಬಂದಿದೆ. ವಾರಾಂತ್ಯದಲ್ಲಿ ಮಾತ್ರ ನಡೆಯುವ ನಮ್ಮ ಶಾಲೆಯ ಮಕ್ಕಳು ಒಮ್ಮೊಮ್ಮೆ ಕೊಟ್ಟ ಮನೆಕೆಲಸ ಮಾಡದೇ ಬರುವುದು,ನಂತರ ಅವರು ತರಗತಿಯಲ್ಲಿ ಕುಳಿತು ತಿಣುಕುವಾಗ ನಮಗೆ ಅರ್ಥವಾಗುತ್ತದೆ ಅವರ ಕಷ್ಟ. ಅವರು ಹೋಮ್ ವರ್ಕ್ ಮಾಡದಿದ್ದಕ್ಕೆ ಕೊಡುವ ಕಾರಣಕ್ಕೆ ನಮ್ಮಲ್ಲಿ ಉತ್ತರವೇ ಇರುವುದಿಲ್ಲ. ಹೀಗಿದ್ದಾಗ ಉಪಾಯ ಮಾಡಿ ಆಗಿಂದಾಗ್ಗೆ ಒಂದು ಪುಟ್ಟ ಚಟುವಟಿಕೆ ನಡೆಸಲಾಗುವುದು. ಇದನ್ನು ಪೋಷಕರು ವರ್ಷಕ್ಕೊಮ್ಮೆ ನಮ್ಮನ್ನು ಭೇಟಿಮಾಡಲು ಬಂದಾಗಲೂ ಅವರ ಮೇಲೂ ಪ್ರಯತ್ನ ಮಾಡಿರುವುದು ಉಂಟು. ಆ ಚಟುವಟಿಕೆ ಕಷ್ಟದ್ದೇನಿಲ್ಲ, ಬಹಳ ಸುಲಭವಾದದ್ದೇ.clock

ಅವರಿಗೆ ದೊಡ್ಡ ಗೋಡೆ ಗಡಿಯಾರದ ಸೆಕೆಂಡ್ ಮುಳ್ಳನ್ನು ಕಣ್ಣು ಮಿಟುಕಿಸದೆ ಒಂದು ನಿಮಿಷ ನೋಡುಲು ಹೇಳುವುದು. ಅವರು ಗಡಿಯಾರ ನೋಡುವಾಗ ನಾವು ಅವರನ್ನು ನೋಡುವುದೇ ಒಂದು ಮಜ. ೩೫,೩೬,೩೭ ಅಯ್ಯೋ ಇದೇನು ಒಂದು ನಿಮಿಷ ಮುಗಿತಾನೆ ಇಲ್ಲವೇ, ಕೆಲವರಿಗೆ ಕಣ್ಣಲ್ಲಿ ನೀರು,ಹುಶ್ಶಪ್ಪಾ,ಸಾಕಾಯ್ತು…… ಇನ್ನೂ ಏನೇನೋ ಕೇಳಿಬರುತ್ತದೆ. ಆ ಸಮಯದಲ್ಲಿ ಮತ್ತೊಬ್ಬರು ಬೋರ್ಡಿನ ಮೇಲೆ ಸಾಧ್ಯವಾದಷ್ಟು ಸಂಖ್ಯೆ ಒಂದನ್ನು ಗೀಚುತ್ತಿರುವುದು. ಅಬ್ಭಾ ಮುಗಿತು, ಏನು ಈ ಆಟದ ಫಲಿತಾಂಶ ಎಂದು ಅವರ ತಲೆಯಲ್ಲಿ ಅನ್ನಿಸುತ್ತಿರುವಾಗ. “ನೋಡಿದ್ರಾ ಒಂದು ನಿಮಿಷ ಕಳೆಯೋದು ಎಷ್ಟು ಹೊತ್ತು ಹಿಡಿಯುತ್ತೆ?” ಅಂತ ಹೇಳಿ. ಗೀಚಿದ ಗೆರೆಗಳ ಸಂಖ್ಯೆ ತೋರಿಸಿದಾಗ ಅವರ ಕಣ್ಣರಳುತ್ತದೆ, ಹಾಗಾದರೆ ಒಂದು ನಿಮಿಷದಲ್ಲಿ ಎಷ್ಟು ಪದ ಓದಬಹುದು, ಬರೆಯಬಹುದು, ಎಷ್ಟು ಹೆಜ್ಜೆ ಹಾಕಬಹುದು? ಎಂದೆಲ್ಲಾ ಹೇಳಿದಾಗ ಹುಬ್ಬೇರುತ್ತದೆ. “ಒಂದು ನಿಮಿಷ ಅರೆ! ಅರವತ್ತು ಸೆಕೆಂಡು? ಎಷ್ಟು ಸಮಯ?” ಎಂದವರು ಗುನುಗುತ್ತಿರಲು ಕೂಡಲೇ ಅವರಿಗೆ ಹೀಗೊಂದು ಪ್ರಶ್ನೆ ಎಸೆದಾಗ ತಲೆಯಾಡಿಸದೆ ಇರುವುದಿಲ್ಲ. ಮಕ್ಕಳು ಶಾಲೆ ಮುಗಿಸಿ ಸಾಮಾನ್ಯವಾಗಿ ಮನೆಗೆ ಬರುವುದು ಸಂಜೆ ೪ಕ್ಕೆ. ಮಲಗುವುದು ರಾತ್ರಿ ಹತ್ತಕ್ಕೆ.ಅಲ್ಲಿಗೆ ಒಟ್ಟು ಆರು ಘಂಟೆ, ಅದರಲ್ಲಿ ಒಟ್ಟು ಎಷ್ಟು ನಿಮಿಷ ಇದೆ ೩೬೦ !! ಅದರಲ್ಲಿ ಊಟ, ಆಟ, ಪಾಠ, ಟಿವಿ ಎಲ್ಲಾ ಕಳೆದರೂ ಇನ್ನೂ ಎರಡು ಘಂಟೆ ಉಳಿದಿದೆ ಅರೆ! ಹಾಗಾದರೆ ಎಷ್ಟು ಸಮಯ ನಾವು ವ್ಯರ್ಥ ಮಾಡಿದ್ದೇವೆ ಈ ವರೆಗೆ ? ಎಂಬ ಆಶ್ಚರ್ಯ ಆತಂತ ಅವರ ಮುಖದಲ್ಲಿ ಎದ್ದು ಸೋತು ಗೆದ್ದವರಂತೆ ಮುಗುಳ್ನಗೆ ಕಾಣುತ್ತದೆ. ದಿನಕ್ಕೆ ಎಷ್ಟು ಸಮಯ ನಾನ್ ಸೆನ್ಸ್ ನಲ್ಲೇ ಕಳೆಯಿತಲ್ಲ. “ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂದು ಕನವರಿಸುತ್ತಾ “ಟೈಮ್ ಈಸ್ ಮನಿ” ಎಂದು ತಿಳಿದು ಮುಂದೆ ಎಲ್ಲರೂ ಸಮಯದ ಸದುಪಯೋಗ ಮಾಡಿಕೊಳ್ಳುವರೆಂಬ ಆಶೆಯಿಂದ ಈ ಪುಟ್ಟ ಲೇಖನ ತಮಗೆ ಅರ್ಪಣೆ. ಉಪಯೋಗ ಅನ್ನಿಸಿದಲ್ಲಿ ಹಂಚಿಕೊಳ್ಳಿ. ಇದಾದ ನಂತರ ಮಕ್ಕಳಲ್ಲಿ ಬದಲಾವಣೆ ಕಂಡದ್ದು ಖಂಡಿತ.

ಗಿ ಭಾಷೆ ಗಿನ್ನಡ (ಕನ್ನಡ) ಬಲು ಗಿಷ್ಟ(ಕಷ್ಟ)

ಗಿರೀತಾ(ಬರೀತಾ) ಗೀದ್ರೆ(ಹೋದ್ರೆ) ಗಿದಗಳೇ(ಪದಗಳೇ) ಗೀಕಾಗಲ್ಲ(ಸಾಕಾಗಲ್ಲ) ಗಿನ್ನಿ(ಅನ್ನಿ), ಈ ಗೀ ಗೀಷೆ ನಾವು ದಿನಾ ಗೀತಾಡ್ತಾನೇ ಗಿರ್ತೀವಿ ಗೀದ್ರೆ ಅದರ ಕಡೆ ಗಿಮನಾನೇ ಗಿಡಲ್ಲ. ಗಿಖತ್ ಗಿಜ ಗಿಂದ್ರೆ ಗಿಕ್ಳು(ಮಕ್ಳು) ಅದರ ಗಿರ್ಥ ಗೀಳದ್ರೆ ನಂ ಗೀರತ(ಭಾರತ) ಗೀಶದ ಗೀಷೆನಲ್ ಮಾತ್ರ ಇದು ಗೀಧ್ಯ(ಸಾದ್ಯ) ಅಂತ ಗೀಳಬೇಕು.
ಗೀನುವಾರ ಗಿಧ್ಯಾಹ್ನ ಸಸಸಸ್ಸಾರಿ ಗಿಳಿಗ್ಗೆ ಗಿಂಡಿಗೆ(ತಿಂಡಿಗೆ) ಗಿಪ್ಪಿಟ್ಟು ಗಿಂದು ಗೀಫಿ ಗಿಡಿದು ಹೀಗೇ ಗಿಲೆ ಗಿಟ್ಟು ಗೀಚನೆ ಮಾಡ್ತಾ
ಈಗ ಒಂದೆರೆಡು ಗೀಕ್ಸ್(ಜೋಕ್ಸ್) ಗಿರೆಯೋಣಾ ಗಿನ್ನಿಸ್ತು

ಗೀಕ್ ಗಿಂದು:

ಮಗ: ಗಿಪ್ಪಾ… ಗಿಲ್ಲಿ ಬಾ
ಗಿಪ್ಪ: ಗಿಗು ಗಿಡ್ಡವರನ್ನ ಗಿರ್ಯಾದೆಯಿಂದ ಗಿರೀಬೇಕು
ಮಗ:ಗಿಪ್ಪಾ …..ಗಿರ್ಯಾದೆಯಿಂದ ಗಿಲ್ಲಿ ಬಾ

ಗೀಕ್ ಗಿರಡು:

ಭಿಕ್ಷುಕ: ಗೀಮೀ ಒಂದ್ ಗಿತ್(ಹತ್) ಗೀಪಾಯಿ ಗಿಡಿ, ಗೀಫಿ ಗಿಡೀಬೇಕು
ದಾರಿಹೋಕ:ಯಾಕಯ್ಯ ಗೀಫಿ ಬರೇ ಗೈದು ಗೀಪಾಯಿ ಅಲ್ವಾ?
ಭಿಕ್ಷುಕ: ಗಿರ್ಲ್ ಫ್ರೆಂಡ್ ಗಿದ್ದಾಳೆ
ದಾರಿಹೋಕ: ಗೀಡೋದು ಗಿಕ್ಷೆ ಗಿರ್ಲ್ ಫ್ರೆಂಡ್, ಗಿವ್ವು ಬೇರೆ?
ಭಿಕ್ಷುಕ: ಗಿವ್ವ್ ಮಾಡಿದ್ ಮೇಲೆ ಗಿಕ್ಷೆ ಗೀಡ್ತಾ ಗಿರೋದು ಗೀಮೀ

ಟೊಮಾಟೊ -3D (ನೋವ್ ಸ್ಟೋರಿ)

“ರೀ ಅಂಗಡೀಗೆ ಹೋದಾಗ ಎರಡು ಕೇಜಿ ಟಮೋಟೋ ತನ್ನಿ ಅಂದ್ರೆ ನಾಲ್ಕೇ ನಾಲ್ಕು ತಂದಿದ್ದೀರಲ್ರಿ? ” ಅಂತ ನನ್ನಾಕೆ ಹೇಳಿದ್ರೆ ನನ್ನ ಉತ್ತರ” ಅರೆ ಯಾವಾಗ್ಲೂ ಒಂದೇ ಬೆಲೆ ಇರೋ ಪೀಲ್ಡ್ ಟೊಮಾಟೊ (ಟಿನ್) ತಂದಿದ್ದೀನಿ ನೋಡು ಸಾರಿಗೆ ಅದನ್ನೇ ಬಳಸು “ಅಂತಂದೆ.ನಮ್ಮನೆ ಕಥೆ ಅಲ್ಲ ಇದು ಇತ್ತೀಚಿಗೆ ಟೊಮಾಟೇ ದುಬಾರಿ ಸಿಜನ್ ಅಗ್ಬಿಟ್ಟಿದೆ ಅನ್ನಿ, ಬಜೆಟ್ ನೋಡ್ಬೇಕಾದ್ ಎಲ್ರೂ ಬೇರೆ ಬೇರೆ ಉಪಾಯ ಮಾಡ್ಕೋತಾರೆ. ಅದೇನ್ ಬರಗಾಲ ಬಂತೋ ಗೊತ್ತಿಲ್ಲ ಟಮೋಟೋ ಬೆಲೆ ಆಕಾಶಕ್ಕೇರಿಬಿಟ್ಟಿದೆ ಆಸ್ಟ್ರೇಲಿಯಾದಲ್ಲಿ,compare ಇದೇ ಮೂರು ತಿಂಗಳ ಹಿಂದೆ ತಗೋಳೋರಿರ್ಲಿಲ್ಲ ಅಷ್ಟೊಂದ್ ಅಗ್ಗ, ರಾಶಿ ರಾಶಿ ಬಿದ್ದಿತ್ತು.ಈಗ ಇಲ್ಲಿ ಬೆಲೆ ಗಗನಕ್ಕೇರಿದೆ, ಆದರೆ ಜನವರಿಯಲ್ಲಿ ಕರ್ನಾಟಕದಲ್ಲಿ ಟೊಮಾಟೋ ಬೆಲೆ ಪಾತಾಳಕ್ಕಿಳಿದಿತ್ತು, ರೈತರಿಗೆ ಕಿಲೋಗೆ ಒಂದು ರೂಪಾಯಿ ಎರಡುರೂಪಾಯಿಗೆ ಇಳಿದು ಮಣ್ಣಿನ ಮಕ್ಕಳ ಶ್ರಮ ಮಣ್ಣಿಗೇ ಹೋಯಿತು. ರೊಚ್ಚಿಗೆದ್ದ ರೈತರು ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ರಸ್ತೆಗೆ ಎಸೆದರು, ಡೆಪ್ಯೂಟಿ ಕಮಿಶನರ್ ಕಚೇರಿ ಮುಂದೆ ಲಾರಿಯಲ್ಲಿ ತಂದು ಸುರಿದು ಪ್ರತಿಭಟನೆ ಮಾಡಿದರು. ಮತ್ತೊಂದು ಕಡೆ ನದಿಯಲ್ಲಿ ಸುರಿದ ಸುದ್ದೀನೂ ಇದೆ.tomato-prices HOPCOM ರೈತರ ಸಂಘ 12ರೂ ಕೊಟ್ಟು ಕೊಂಡರೂ ರೈತರಿಗೆ ಅದು ಗಿಟ್ಟದು, ಕಡಿಮೆ ಅಂದರೂ ಕಿಲೋಗೆ 20ರೂ ಸಿಕ್ಕರೆ ಲಾಭವೂ ಇಲ್ಲ ನಷ್ಟಾನೂ ಇಲ್ಲ ಅಂತ ನನ್ನ ಸಂಬಂಧಿ ರೈತನ ಹೇಳಿಕೆ.ಇತರೆ ತರಕಾರಿಗಳಂತೆ ಇದನ್ನು ಹೆಚ್ಚುದಿನ ಇಟ್ಟು ಒಳ್ಳೆ ಬೆಲೆ ಬಂದಾಗ ಮಾರುವಹಾಗಿಲ್ಲ, ಕೊಳೆಯುವ ಸಂಭವ ಹೆಚ್ಚು. ಟಮೋಟೋ ಬೆಲೆ ಮೇ ತಿಂಗಳಲ್ಲಿ ಗಮನಿಸಿದರೆ ಕರ್ನಾಟಕ, ತಮಿಳುನಾಡು,ಆಂಧ್ರಗಳಲ್ಲಿ ವಿಪರೀತ ದುಬಾರಿ, 2012 ಮೇ – ಕಿಲೋ ಗೆ 22ರೂ ಇದ್ದರೆ ಮುಂದೆ 2013 ರಲ್ಲಿ – 52 ರೂ ! ಇಲ್ಲೂ ಹಾಗೇ ಜನವರಿಯಲ್ಲಿ ಕಿಲೋಗೆ $5 ರಿಂದ $12 ವರೆಗೂ ಏರಿದೆ. ಅದೇ ಬೆಲೆಗೆ ಹತ್ತು ಅಥವಾ ಇಪ್ಪತ್ತು ಕಿಲೋ ಈರೂಳ್ಳಿ ಕೊಳ್ಳಬಹುದು. ಇದಕ್ಕೆ ಪರಿಹಾರ ಉಂಟೇ ಇದೆ ಅನ್ನಿಸುತ್ತೆ ….tom india

ಅದಿರಲಿ ಮರೆತಿದ್ದೆ ಈ ಟೊಮಾಟೋ ಹಣ್ಣೋ ತರಕಾರೀನೋ ಅನ್ನೋ ಅನುಮಾನ ಎಷ್ಟೋ ಜನರಿಗಿದೆ, ಟಮೋಟೋ ಕೂಡಾ ಒಂದು ಜಾತಿಯ ಹಣ್ಣು. ದ.ಅಮೇರಿಕಾ ದಿಂದ ಸ್ಪೈನ್ ಮೂಲಕ ಎಲ್ಲ ಕಡೆ ಹಬ್ಬಿದೆ ಅನ್ನೋ ಇತಿಹಾಸ ಇದೆ. ಪ್ರಪಂಚದಲ್ಲಿ ಚೈನಾ ಬಿಟ್ಟರೆ ಭಾರತವೇ ಹೆಚ್ಚು ಬೆಳೆಯುವ ದೇಶ. ಕರ್ನಾಟಕದಲ್ಲಿ ಕೋಲಾರ ಮತ್ತು ರಾಯಚೂರು ಹೆಚ್ಚು ಟೊಮಾಟೊ ಬೆಳೆಯುವ ಜಿಲ್ಲೆಗಳು. ಕನ್ನಡದಲ್ಲಿ ಇದಕ್ಕೆ “ಚಪ್ಪರ ಬದನೆ”, “ಗೂರೆ ಹಣ್ಣು” ಎನ್ನುವ ಹೆಸರಿದ್ದರೂ ಬಸ್ಸು, ಕಾರು, ಬಕೆಟ್,ಟಿಕೆಟ್ ಎನ್ನುವ ಹಾಗೆ ಟೊಮಾಟೋ ಪದ ಕೂಡಾ ಬಳಕೆಯಲ್ಲಿದೆ.production ಸಾಮಾನ್ಯ ಭಾರತೀಯರ ಮನೆಯಲ್ಲಿ ಈರೂಳ್ಳಿ ಟೊಮಾಟೋ ಸಾಧಾರಣ ಸ್ಟಾಕ್ ಇದ್ದೇ ಇರುತ್ತದೆ. ಅವಲಕ್ಕಿ/ಮಂಡಕ್ಕಿ ಮತ್ತಿವೆರಡೂ ಇದ್ದರೆ ಸುಮಾರು ಹತ್ತು-ಹದಿನೈದು ತಿನಿಸು ಮಾಡಬಹುದು ಅನ್ನಿ.ಚೆರ್ರಿ,ರೊಮ,ಇಂಡಿಗೋ,ಇಟಾಲಿಯನ್ ರೋಸ್,ಈಸಿಸ್ ಕ್ಯಾಂಡಿ ಇನ್ನೂ ತರಾವರಿ ಟೊಮಾಟೋ ಐನೂರಕ್ಕೂ ಮೀರಿ ತಳಿಗಳಿವೆ ಪ್ರಪಂಚದೆಲ್ಲೆಡೆ. ಪೈನಾಪಲ್ ಜಾತಿಯ ಒಂದು ಟೊಮಾಟೋ ಆರು ಅಡಿ ಎತ್ತರ ಬೆಳೆಯುತ್ತದಂತೆ. ಯೂರೋಪ್ ಖಂಡಕ್ಕೆ ಇದನ್ನು ಪರಿಚಯಿಸಿದಾಗ ಇದನ್ನು ಇಂದು ಜಾತಿಯ ವಿಷದ ಚೆರ್ರಿ ಎಂದು ನಂಬಿಕೆ ಕೂಡಾ ಇತ್ತು. ಟಮೋಟೊ ಹಣ್ಣಿನಲ್ಲಿ henbane, mandrake and deadly nightshade ತಳಿಗಳಲ್ಲಿ ತುಂಬಾ ಕಡಿಮೆ ಪ್ರಮಾಣದ ವಿಷವಿದ್ದರೂ ಅಪಾಯವಿಲ್ಲ, ಹಸಿರಾದ ಟೊಮಾಟೊ ಕಾಯಿಯಲ್ಲಿ ಕೊಂಚ ಪ್ರಮಾಣ ಇರುತ್ತದೆ.Pineapple-1 ಸಾರು,ಸಾಂಬಾರಿನಿಂದ ಹಿಡಿದು ಚಟ್ನಿ, ರಾಯತ, ಗೊಜ್ಜು, ಸಾಲಡ್,ಪಾನಿಪೂರಿ ವರೆಗೂ ನೂರಾರು ತಿನಿಸುಗಳಲ್ಲಿ ಟೊಮಾಟೋ ಬಳಸಿದರೆ ಹಸಿವಾದಾಗ ಕತ್ತರಿಸಿ ಸಕ್ಕರೆ ಸಿಂಪಡಿಸಿ ತಿನ್ನುವವರಿದ್ದಾರೆ. ಇಡೀ ಟೊಮಾಟೊ ಹಾಗೇ ಜಗಿದು ತಿನ್ನುವ ಜನರೂ ಇದ್ದಾರೆ,ಈ ಸನ್ನಿವೇಶ ನಟ ಅನಂತನಾಗ್ “ಬರ” ಚಿತ್ರದಲ್ಲಿ ಸೊಗಸಾಗಿ ಅಭಿನಯಿಸಿ ತೋರಿಸಿದ್ದಾರೆ.

ಪರಿಹಾರ ಮರೆತಿದ್ದೆ ನೋಡಿ….ಒಂದೆಡೆ ಬೆಲೇನೇ ಇಲ್ಲದ ಸಂಗತಿ ಮತ್ತೊಂದು ಕಡೆ ಟೊಮಾಟೋ ಬೆಲೆ ನೋಡಿ ತೊಗೋಬೇಕಾ ಅನ್ನೋಷ್ಟು ದುಬಾರಿ, ಒಂದು ಕಡೆ ಕೂಳಿಲ್ಲದ ಜನ ಮತ್ತೊಂದು ಕಡೆ ಧವಸ ಧಾನ್ಯ ಗಂಗೆಯಪಾಲು, ಇನ್ನೋಂದು ಕಡೆ ರಸ್ತೆಯಲ್ಲಿ ಎರಚಾಡುವ ಸಂಪ್ರದಾಯ ಹಬ್ಬ (Spanish festival) ಇದೆಲ್ಲಾ ಗಮನಿಸಿದರೆ ಅ ಆ ಇ ಈ ಹಾಡು ಜ್ಞಾಪಕ ಬರಲ್ವಾ? ಏನ್ ಹೇಳಿ ” ಇದ್ದವರೆಲ್ಲಾ ಇಲ್ಲದವರಿಗೆ ನೀಡಲೆ ಬೇಕು”. ಅಲ್ಲದಿದ್ದರೂ ವ್ಯಾಪಾರ ವಹಿವಾಟು ಮಾಡ್ಕೋಬಹುದು.ಅಷ್ಟೇನಾ? ಇಷ್ಟು ಸರಳ ಪರಿಹಾರಾನಾ ಅಂದ್ಕೋಬೇಡಿ.ಅಮೇರಿಕನ್ನರು ತೆಗೆದ ವಿಟ್ಲಾಚಾರಿ ಸಿನಿಮಾಗಳು ಇತ್ತೀಚಿಗೆ ನಿಜವಾಗ್ತೀರೋದ್ ನೋಡಿದ್ರೆ ಇಂಗ್ಲೀಶಿನಲ್ಲಿ “ಟೊಮಾಟೋ ಬಗ್ಗೆ ಒಂದು 3D ಡಾಕ್ಯಮೆಂಟ್ರಿ/ಸಿನಿಮಾ ಬಂದ್ರೆ ಹೇಗೆ ? spain

ಶರಪೋವ ಆಟ – ಮೈಮಾಟ

ಮರಿಯಾ ಶರಪೋವ ಟೆನ್ನಿಸ್ಸಿಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಸುಂದರಿ ಎನ್ನುವ ಮಾತು ಉತ್ಪ್ರೇಕ್ಷೆ ಅಲ್ಲ. 2004 ರಲ್ಲಿ Wimbledon, 2006 ರಲ್ಲಿ US open ,2008 ರಲ್ಲಿ Australian open, 2012 ರಲ್ಲಿ French open ಗೆದ್ದಿರುವ ಈಕೆ ಇದೇ ವೇಳೆಯಲ್ಲಿ ನಾಲ್ಕು ರನ್ನರ್ ಸ್ಥಾನವನ್ನೂ ತಲುಪಿದ್ದಾಳೆ. ಮೂಲತಃ ರಷ್ಯಾ ದೇಶದ ಈ ಬೆಡಗಿ ಜನಿಸಿದ್ದು 87ರಲ್ಲಿ ಆದರೂ ಅಮೇರಿಕಾ ಸೇರಿದ್ದು ಆರನೇ ವಯಸ್ಸಿಗೆ,ಆಕೆ ತರಬೇತಿ ಶಿಬರ ಸೇರಿದ್ದು ಮಾರ್ಟೀನಾ ನವ್ರಾಟಿಲೋವಾ ಬಳಿ, ಸ್ವತಃ ಮಾರ್ಟೀನಾಳೆ ಮರಿಯಾಳನ್ನು ಒಳ್ಳೆ ತರಬೇತಿ ಪಡೆಯುವ ಸಲಹೆಯ ಮೇರೆಗೆ ಅಮೇರಿಕಾ ಸೇರಿದಳು. ಟೀನೆಜ್ ನಲ್ಲೇ ವಿಂಬಲ್ಡನ್ ಕಿರೀಟ ಈಕೆಗೆ. sharapova 1
ಒಬ್ಬ ಆಟಗಾರ ಒಮ್ಮೆ ಆಸ್ಟ್ರೇಲಿಯನ್ ಓಪನ್ ನಂತಹ ಪಂದ್ಯಾವಳಿಯಲ್ಲಿ ಪ್ರವೇಶ ಪಡೆದು ಪ್ರತಿ ಪಂದ್ಯ ಗೆದ್ದಾಗ ಸಂಪಾದನೆ ಎಷ್ಟಿರಬಹುದು ಊಹಿಸಿ? ಇನ್ನೂರು ಮುನ್ನೂರು ಸಾವಿರ ಡಾಲರ್ ಗಳು ! ಕ್ವಾರ್ಟರ್ ಫೈನಲ್ ತಲುಪಿದರೆ ಇನ್ನೂ ಹೆಚ್ಚು, ಸೆಮೀಸ್ ತಲುಪಿದವರಿಗೆ ಐನೂರು ಸಾವಿರ ಇನ್ನೂ ಫೈನಲ್ ತಲುಪಿದವರಿಗೆ ಮಿಲಿಯನ್ ಗಟ್ಟಿ. ಹೀಗೆ ಪಂದ್ಯದಲ್ಲೇ ಇಷ್ಟು ಹಣ ಗಳಿಸುವ ಈ ಟೆನ್ನಿಸ್ ಪಟುಗಳು ಜಾಹಿರಾತುಗಳಲ್ಲಿ ಇದರಷ್ಟೆ ಹಣ ಗಿಟ್ಟಿಸುತ್ತಾರೆ. ಉದಾಹರಣೆಗೆ ಫೆಡರರ್ ಕಳೆದ ವರ್ಷದ ವಾರ್ಷಿಕ ಆದಾಯ 71 ಮಿಲಿಯನ್ ಡಾಲರ್, ಅತಿ ಚಿಕ್ಕ ವಯಸ್ಕಳಾದ ಶರಪೋವಳ ಕಳೆದ ವರ್ಷದ ಆಟದ ಆದಾಯ 29 ಮಿಲಿಯನ್ ಡಾಲರ್, ಇವಳ ಹಿಂದೆ ಮುಂದೆ ಈ ರೀತಿ ಸಂಭಾವನೆ ಪಡೆಯುವವರು ಇನ್ನೂ ಕೆಲವರು ಇದ್ದರೂ ಇಂದು ಈಕೆಯ ಪ್ರಸ್ತಾಪಕ್ಕೆ ಕಾರಣ ಮುಂದಕ್ಕೆ ಓದಿದಾಗ ನೀವೂ ಓಹೋ ಎಂದು ಹುಬ್ಬೇರಿಸಬಹುದು.GERMANY-PORSCHE-TENNIS
ಮರಿಯಾ ಶರಪೋವಾ ವಿದ್ಯಾಭ್ಯಾಸ ಮಾಡಿದ್ದು ಏನೇ ಇರಲಿ ಆದರೆ ಬಹಳ ವರ್ಷಗಳ ಕಾಲ Nike ಮತ್ತು TAG Heuer ಜೊತೆಗಿನ ಉನ್ನತ ಮಾರ್ಕೆಟಿಂಗ್ ಅಧಿಕಾರಿಗಳ ಸಂಗಡ ಕಾರ್ಯಾನಿರ್ವಹಿಸಿ ಮಾಸ್ಟರ್ಸ್ ಇನ್ ಮಾರ್ಕೆಟ್ಟಿಂಗ್ ಪದವಿಯಷ್ಟೆ ಅನುಭವ ಪಡೆದಳು. 700,000 ಡಾಲರ್ ಸ್ವಂತ ಹೂಡಿಕೆ ಇರುವ “Sugarpova ” ಎಂಬ ಮಿಠಾಯಿ ಕಾರ್ಖಾನೆ ಆರಂಭಿಸಿ 2013 ರಲ್ಲಿ 1.3 ಮಿಲಿಯನ್ ಚೀಲಗಳ ಮಾರಾಟ 25 ದೇಶಗಳಲ್ಲಿ ಮಾಡಿದಳು. ಬರೇ ಚೀನಾದಲ್ಲೇ 16000 ಚೀಲಗಳ ಮಾರಾಟ ದಾಖಲಾಯಿತು. ಶರಪೋವಾ ತನ್ನ ಹಣದಲ್ಲಿ ಕೆಲವು ಸಕಾರ್ಯವನ್ನೂ ಮಾಡುತ್ತಿದ್ದಾಳೆ UNDP ಸಂಸ್ಥೆಗೆ $250,000 ದಾನ ಮಾಡಿದ್ದಾಳೆ, Belauras ಶಾಲೆಗಳಿಗೆ $210,000 Scholarship ಗಾಗಿ ಮುಡುಪಿಟ್ಟಿದ್ದಾಳೆ.
ಇಲ್ಲೊಂದು ಹಳೇಯ ಮಾತು ಜ್ಞಾಪಕಕ್ಕೆ ಬರುತ್ತದೆ “ಹತ್ತು ಲಕ್ಷ ಇರುವವನು ತೃಪ್ತನೋ? ಹತ್ತು ಮಕ್ಕಳಿರುವವನು ತೃಪ್ತನೋ?” ಉತ್ತರ – ಹತ್ತು ಮಕ್ಕಳಿರುವವನು. ಏಕೆಂದರೆ ಅವರಿಗೆ ಹೊಟ್ಟೆ ಬಟ್ಟೆಗೆ ಹೊಂದಿಸುವುದೇ ಆತನಿಗೆ ಕಷ್ಟವಾಗಿರುತ್ತದೆ, “ಸಾಕಪ್ಪ ಇನ್ನು ಮಕ್ಕಳು” ಎನ್ನುತ್ತಾನೆ, ಆದರೆ ಹತ್ತು ಲಕ್ಷ ಇರುವಾತ “ಅದನ್ನು ಹೇಗೆ ಇಪ್ಪತ್ತು ಮಾಡಲಿ?” ಆ ಇಪ್ಪತ್ತನ್ನು ಮತ್ತೆ ನಲವತ್ತು ಮಾಡುವ ಯೋಚನೆ. ಕಡೆಗೆ ತೃಪ್ತಿಗೆ ಕತ್ತರಿಯೇ ಇಲ್ಲ.ಹಾಗೇ ಶರಪೋವ ಮುಂದೆ ಸುಗಂಧವುಳ್ಳ ಮೇಣದಬತ್ತಿ, ಸುಗಂಧ ದ್ರವ್ಯ ಇತ್ಯಾದಿಗಳ ಯೋಜನೆ ಹೊಂದಿದ್ದಾಳೆ. 25ಕ್ಕೇ ನಿವೃತ್ತಿ ಹೊಂದುವೆ ಎಂದು ಘೋಷಿಸಿದ ಶರಪೋವಾ ಇನ್ನೂ ಮುಂದುವರೆಸುತ್ತಿರುವುದು ಇದಕ್ಕೆ ಒಂದು ಸಾಕ್ಷಿ.maria_sharapova
ಆಸ್ಟ್ರೇಲಿಯಾದಲ್ಲೂ David Jones ನಂತಹ ದೊಡ್ಡ ಅಂಗಡಿಗಳಲ್ಲಿ “Sugarpova ” ಬ್ರಾಂಡ್ ಮಿಠಾಯಿ $6 ಡಾಲರ್ ಗಳಿಗೆ ಮಾರಾಟಕ್ಕಿದೆ, ಕೆಲವು ಪತ್ರಿಕೆಗಳು ಆಟಗಾರರು ಇಂಥಾ ಅನಾರೋಗ್ಯಕರ ಸಕ್ಕರೆಯ ಪದಾರ್ಥಕ್ಕೆ ಪ್ರೋತ್ಸಾಹ ಮಾಡುವುದು ಸರಿಯಲ್ಲ ಎನ್ನುವವರಿಗೆ ಆಕೆಯ ಏಜೆಂಟ್ Max Eisenbud ಕೊಟ್ಟ ಹೇಳಿಕೆ ಹೀಗೆ “McDonalds ಮತ್ತು Coca Cola ದಂತಹ ಪದಾರ್ಥಗಳಲ್ಲಿ ಇದಕ್ಕೂ ಹೆಚ್ಚು ಸಕ್ಕರೆಯ ಅಂಶವಿದೆ ಅದನ್ನು ಮಾರಾಟ ಮಾಡಲು ಬಳಸುತ್ತಿರುವುದೂ ಪ್ರಖ್ಯಾತ ಆಟಗಾರರನ್ನೇ ” ಖರೆ ಅಲ್ಲವೇ. ಶರಪೋವಾಳ ಸುಂದರ ಮೈಮಾಟ, ಪ್ರತಿ ಹೊಡೆತಕ್ಕೂ ಘರ್ಜಿಸುವ ಆಟ,ಇದರ ಜೊತೆ ಜೊತೆಗೆ ಮಿಠಾಯಿ ಮಾರಾಟ ಎಲ್ಲವೂ ಹೆಚ್ಚು ಹೆಚ್ಚು ಎತ್ತರಕ್ಕೇರುತ್ತಿದೆ, ಅದು ಗೆಲುವಿನ ಗಾಳಿಪಟದಂತೆ ತೋರುತ್ತಿದೆ.

ಪುರುಷ ಪ್ರಯತ್ನವೋ – ದೈವಾನುಗ್ರಹವೋ

ಡಿ ವಿ ಜಿ ಅವರ ಬಾಳಿಗೊಂದು ನಂಬಿಕೆ ಪುಸ್ತಕ ಕುರಿತು ಶ್ರೀ ಗುರುರಾಜ ಖರ್ಜಗಿ ನೀಡಿದ ಉಪನ್ಯಾಸ ಮಾಲೆಯಲ್ಲಿ ಒಂದೆಡೆ ಕೇಳಿಬರುವ ಮೂರು ಮುಖ್ಯ ಅಂಶಗಳಾದ ಜೀವನೋತ್ಸಾಹ,ಲೋಕಸ್ನೇಹ ಮತ್ತು ಪುರುಷಪ್ರಯತ್ನ.ಇವುಗಳಲ್ಲಿ ಮೊದಲೆರಡರ ಬಗ್ಗೆ ಪರಿಚಯಿಸುವ ಪ್ರಯತ್ನ  ಈ ಮೊದಲಿನ  ಪೋಸ್ಟ್ ನಲ್ಲಿ ಮಾಡಿದ್ದೆ, ಈಗ ಕಡೇಯ ವಿಷಯ “ಪುರುಷ ಪ್ರಯತ್ನ”, ಖರ್ಜಗಿಯವರ ಅಮೋಘ ವಿವರಣೆಯ ಮಟ್ಟ ತಲುಪಲಾಗದಿದ್ದರೂ ಪರಿಚಯಿಸುವ ಪ್ರಯತ್ನ ಮಾಡುವ ಆಸೆ.temple (1)

ಪುರುಷ ಪ್ರಯತ್ನ-ಇದನ್ನು ವಿಂಗಡಿಸಿ ವಿವರಿಸುವ ಕಷ್ಟ ಬೇಕಿಲ್ಲ, ಸರಳವಾಗಿ ಹೇಳುವುದಾದರೆ ಎಂದಾದರೂ ನಾವು ದೂರದ ಊರಿಗೆ ಪ್ರಯಾಣಿಸುವಾಗ ಹಸಿರು ಕಾಡು, ಜುಳುಜುಳು ಹರಿಯುವ ನೀರು,  ಧುಮುಕುವ ಜಲಪಾತ,  ಚಿಕ್ಕಚಿಕ್ಕ ಗುಡ್ಡ, ದೊಡ್ಡ ಬೆಟ್ಟಗಳ ಸಾಲು, ಕಣ್ ಹರಿಯುವಷ್ಟೂ ಕಾಣುವ ಸಾಗರ ಇವೆಲ್ಲಾ ಧರೆಯ ಸಹಜ ಸೃಷ್ಟಿ ಆದರೂ ಅದೆಷ್ಟು ತಾಳ್ಮೆಯಿಂದ ನಿಂತಿವೆ / ಸಾಗಿವೆ ಅಲ್ಲವೇ? ಆದರೆ ಅದೇ ಸಾವಿರಾರು ಅಡಿಎತ್ತರದ ದೂರದ ಬೆಟ್ಟದ ಮೇಲೊಂದು ಕಲ್ಲಿನಲ್ಲಿ ಕಟ್ಟಿದ  ಪುಟ್ಟ ದೇಗುಲ, ಭೂಮಿಯನ್ನೇ ಇಬ್ಭಾಗ ಮಾಡುವಂತೆ ಹರಿಯುವ ನದಿಗೆ ನೂರಾರು ಅಡಿ ಉದ್ದದ ತೂಗುವ ಸೇತುವೆ, ದೇಶ ದೇಶಗಳು ಸಾವಿರಾರು ಮೈಲು ದೂರವಿದ್ದರೂ ತಲುಪಲು ಕಟ್ಟಿದ ದೋಣಿ, ಕಡಲಾಳದಿ ಧುಮುಕಿ ತರುವ ಮುತ್ತು, ಭೂಗರ್ಭದಿ ಇಳಿದು ಕಡಿದು ತರುವ ಚಿನ್ನ-ವಜ್ರ ಇನ್ನೂ ಹೇಳುತ್ತಾ ಹೊರಟರೆ  ಪುರುಷ ಪ್ರಯತ್ನಕ್ಕೆ ಪುಟಗಳು ಸಾಲವು. ಅವಿಷ್ಕಾರಗಳು ಸಾವಿರಾರು ವರ್ಷಗಳಿಂದ ಆಗುತ್ತಾ ಬಂದಿದ್ದರೂ ಇತ್ತೀಚಿಗೆ ಸುಮಾರು ಇನ್ನೂರು ವರ್ಷಗಳಲ್ಲಿ ಉತ್ತುಂಗಕ್ಕೇರಿದೆಯಂದರೆ ಉತ್ಪ್ರೇಕ್ಷೆ ಆಗಲಾರದು. ಪುರುಷ ಅಂದ ಮಾತ್ರಕ್ಕೆ ಗಂಡಸರುಮಾತ್ರವಲ್ಲ ಇದು ಇಡೀ ಮನುಜಕುಲಕ್ಕೆ ಸಂಬಂಧಿಸಿದ್ದು.

“ಆಗದು ಎಂದು ಕೈಕಟ್ಟಿ ಕುಳಿತರೆ” ಇದು ಬಂಗಾರದ ಮನುಷ್ಯ ಚಿತ್ರದ ಒಂದು ಹಿಟ್ ಸಾಂಗ್, ಆದರೆ ಪ್ರಯತ್ನವೇ ಪಡದೆ “ಅಯ್ಯೋ ನನ್ನಿಂದಾಗದು”  “ಆ ಕೆಲಸ ತುಂಬಾ ಕಠಿಣ”  “ವಯಸ್ಸಿನಲ್ಲಿದ್ದಾಗ  ನಾನು ಏನೇನು ಸಾಹಸ ಮಾಡಿದ್ದೆ ಗೊತ್ತಾ” “ಅರೆ ನಮಗ್ಯಾಕಿದ್ದೀತು ರಿಸ್ಕ್” “ಅಯ್ಯೋ ಟೈಮೇ ಇಲ್ಲಪ್ಪ,ಕೆಲಸ, ಮನೆ ಮಕ್ಕಳು”  “ ಮನೆ ಕೆಲಸಕ್ಕೇ ಟೈಮಿಲ್ಲ ಇನ್ನು ಸಮಾಜಕ್ಕೆ!” “ ನೀವ್ ಬಿಡಿ ಅಧೇಗೆ ಟೈಮ್ ಮಾಡ್ಕೋತಿರಪ್ಪಾ” ಹೀಗೆ ಹತ್ತಾರು ಕಾರಣ ಕೇಳಿ ಬರುತ್ತದೆ. ಇದು ಸಾಮಾನ್ಯರ ಸಾಮಾನ್ಯ ನುಡಿ.

“ಮನಸ್ಸಿದ್ದರೆ ಮಾರ್ಗ” ಗಾದೆ  ಕೇಳಿರಲೇಬೇಕು ನೀವು. ಗಾದೆ ಸುಳ್ಳಗಲ್ಲ ಅಂತಾನೂ ಕೇಳಿರಬೇಕು.ಆದರೆ ದೊಡ್ಡ ದೊಡ್ಡ ಯೋಜನೆ, ಸಾರ್ವಜನಿಕರಿಗಾಗಿ  ಉದ್ಯೋಗ, ರೈತರ ಏಳಿಗೆ, ರಾಷ್ಟ್ರದ ಮುನ್ನಡೆಗೆ, ಅದೆಷ್ಟೋ ಯೋಜನೆಗಳು ಬರೀ ಗುದ್ದಲಿ ಪೂಜೆಯಲ್ಲೇ ಅಂತ್ಯಗೊಡಿವೆ, ಸರ್ಕಾರದ ನಿರ್ಲಕ್ಷ್ಯವೋ ಆರ್ಥಿಕ ಬಿಕ್ಕಟ್ಟು, ಸ್ಥಳೀಯರ ಪ್ರತಿಭಟನೆ – ಇನ್ನೂ ನಾಲ್ಕಾರು ಕಾರಣ ಇರಬಹುದು.ವಿಶ್ವೆಶ್ವರಯ್ಯನವರು ಪುರುಷಪ್ರಯತ್ನ,ಜೀವನೋತ್ಸಾಹ ಮತ್ತು ಲೋಕಸ್ನೇಹ ಎಲ್ಲಕ್ಕೂ ಹೊಂದುವ ಹೆಸರು/ವ್ಯಕ್ತಿ.sirmvish

ಪ್ರಕೃತಿಯ ಸೃಷ್ಟಿಯನ್ನು ದೈವಾನುಗ್ರಹ ಎಂದು ನಂಬುವ ಬಹುತೇಕ ಜನ  ಪ್ರಯತ್ನಕ್ಕೆ ಕೈ ಎತ್ತುವ (ನಿಷೇದಾರ್ಥ) ಸಾಧ್ಯತೆಯೇ ಹೆಚ್ಚು, ಎಲ್ಲವೂ ಭಗವಂತನೇ ಮಾಡಿ ಬಿಟ್ಟಿದ್ದರೆ ನಮಗೇನು ಕೆಲಸ? ಅವನಿತ್ತ ಚಿತ್ತದಲಿ ಶಕ್ತಿಯನು ಯುಕ್ತಿಯಲಿ ಬಳಸಿ impossible ಅನ್ನುವ ಶಬ್ದ ಇಂಗಿಸಬಹುದು.

ತಾಯಿ ತನ್ನ ಮಗುವಿಗೆ ಖಾಯಿಲೆ ಬಂದಾಗ ಹರಕೆ ಹೊತ್ತು ದೇವರ ಮುಂದೆ ಕೈಜೋಡಿಸಿ ಕೂಡುವುದಕ್ಕಿಂತ,ವೈದ್ಯರನ್ನು ಕಾಣುವ ಪುರುಷ ಪ್ರಯತ್ನ ಮಾಡುವುದು ಉಚಿತವಲ್ಲವೇ?. ನಂಬಿಕೆ ಇರಬೇಕು ಆದರೆ ಪ್ರಯತ್ನ ಬಿಡಬಾರದು.

thunderstorm

ನಂಬಿಕೆಯ ಬಗ್ಗೆ ಪುಟ್ಟ ಪ್ರಸಂಗ / ಕಥೆ ಜ್ಞಾಪಕಕ್ಕೆ ಬಂತು, ಭೀಕರ ಚಂಡಮಾರುತಕ್ಕೆ ಸಿಲುಕಿದ ನೌಕೆಯಲ್ಲಿ ಬಹಳ ಜನಪ್ರಯಾಣಿಸುತ್ತಿದ್ದರು, ಎಲ್ಲರೂ ಭಯಭೀತರಾಗಿದ್ದರು, ಆದರೆ  ಒಬ್ಬ Jewish ಸಂತ  ಮಾತ್ರ ಧ್ಯಾನ ಮಾಡುತ್ತಾ  ಕುಳಿತಿದ್ದ, ಆತನ ಹೆಂಡತಿ ಕೋಪದಿಂದ “ಸ್ವಾಮೀ ಎಲ್ಲರೂ ಹೆದರಿದ್ದಾರೆ ನಿಮಗೆ ಏನೂ ಅನ್ನಿಸಲಿಲ್ಲವೇ, ಭಯವಾಗುತ್ತಿಲ್ಲವೇ, ಹೇಳಿ”ಎಂದು ಗದರಿದಳು, ತಕ್ಷಣ ಆತ ತನ್ನ ಜೇಬಿನಿಂದ ಹರಿತವಾದ ಕತ್ತಿ ತೆಗೆದು ತನ್ನ ಪತ್ನಿಯ ಕತ್ತಿಗೆ ತಾಗುವಂತೆ ಹಿಡಿದು,”ಈಗ ಹೇಳು ನಿನಗೆ ಭಯ ಆಗುವುದಿಲ್ಲವೇ?” ಎಂದ.  ಕಣ್ಣರಳಿಸಿ ಹುಬ್ಬೇರಿಸಿ ನಡುಗುವ ದ್ವನಿಯಲ್ಲಿ ಉತ್ತರಿಸಿದಳು “ಹರಿತವಾದ ಕತ್ತಿಕಂಡರೆ ಭಯ ಆಗುತ್ತದೆ, ಆದರೆ ಹಿಂದಿರುವ ನಿಮ್ಮ ಮೇಲೆ ನಂಬಿಕೆ ಇದೆ” ಎಂದಳು. ಅದಕ್ಕೆ ಆತ “ನನಗೂ ಹಾಗೇ  ಚಂಡಮಾರುತ ಕಂಡರೆ ಭಯ ಆದರೆ ಅದರ ಹಿಂದಿರುವಾತನ ಮೇಲೆ ಅಪಾರ ನಂಬಿಕೆ” ಎನ್ನುತ್ತಾನೆ. ಆತ ಒಬ್ಬ ದೈವ ಭಕ್ತನಾಗಿದ್ದನು. ಎಲ್ಲರೂ ದೇವರನ್ನು ಪ್ರಾರ್ಥಿಸಿ ಎಂದಾಗ ಆಗಲಿ ನಾನು ಪ್ರಾರ್ಥಿಸುವೆ,  ನೀವು ನೀರು ಹೊರಗೆ ಹಾಕುವುದನ್ನು ನಿಲ್ಲಿಸಬೇಡಿ ಎಂದನು.

ಪ್ರಯತ್ನಗಳು ಸ್ವಂತ ಉಪಯೋಗಕ್ಕೆ ಆಗಿದ್ದವು ಇಲ್ಲಿ ಲೆಕ್ಕಕ್ಕೆ ಬಾರವು, ಜನೋಪಯೋಗ, ಲೋಕಕಲ್ಯಾಣ, ತಂತ್ರಜ್ಞಾನ ಅವಿಷ್ಕಾರಗಳು ಯಾವುದೇ ಇರಲಿ ಅದನ್ನು  ಮೊಟ್ಟಮೊದಲು ಮಾಡುವ ಅಥವಾ ಯಾರಿಗೆ ಅಂಥಾ ಪ್ರಯತ್ನ ಮಾಡುವ ಧೈರ್ಯ ಬುದ್ಧಿ – ಶಕ್ತಿ ಬರುತ್ತದೋ  ಅದೇ ಪುರುಷಪ್ರಯತ್ನ, ಅದಿಲ್ಲವಾದಲ್ಲಿ  ನಾವು ಅದೆಷ್ಟು ಹಿಂದಿರಬೇಕಿತ್ತೋ …….ಹಾಗಂತ ಮಾಡುವವರು ಮಾಡಲಿ ನಾವು ಮಾತ್ರ ಸುಮ್ಮನೆ ಕೂಡೋಣ  ಅನ್ನೋದು ಒಳ್ಳೆಯದಲ್ಲ  ಎಂಬುದು ನನ್ನ ನಂಬಿಕೆ.

ಲೋಕಸ್ನೇಹ – ಎಲ್ಲಕ್ಕೂ ಮೀರಿದ್ದು

           ಈ ಹಿಂದಿನ ಪೋಸ್ಟಿನಲ್ಲಿ ಡಿ ವಿ ಜಿ ಅವರ ಜೀವನೋತ್ಸಾಹದ ಬಗ್ಗೆ ಪರಿಚಯಿಸಿದ್ದೆ ಈಗ ಅವರ ಮೂರು ಮುಖ್ಯವಾದ ಪ್ರಸ್ತಾಪಗಳಲ್ಲಿ ಎರಡನೇ ವಿಷಯ ಲೋಕಸ್ನೇಹದ ಬಗ್ಗೆ ಎರಡು ಮಾತು.
ಈ ಲೋಕದಲ್ಲಿ ಏನಾದರೂ ನಡೆಯಬೇಕಾದರೆ ಹಣವೊಂದಿದ್ದರೆ ಸಾಧ್ಯವೇ?ಇಲ್ಲ. ಒಳ್ಳೆಯ ಧರ್ಮ, ಜ್ಞಾನ, ಅದನ್ನು ಬಳಸುವ ಬುದ್ಧಿ, ಅವೆಲ್ಲಕ್ಕಿಂತ ಮಿಗಿಲಾಗಿ ಮುಖ್ಯ ಜನಬಲವೂ ಬೇಕು. ಉತ್ತಮ ಕೆಲಸಕ್ಕೆ ಜನಮನ ಒಂದಾಗಬೇಕಾದರೆ ಲೋಕಸ್ನೇಹದ ಅರಿವು ಮೂಡಬೇಕು.
         ಈ ಸ್ನೇಹ ಅನ್ನುವ ಬಂಧವೇ ಚೆನ್ನ. ಆಪ್ತ ಸ್ನೇಹ, ಪ್ರಾಣಸ್ನೇಹಿತರು, ಗಳಸ್ಯ ಕಂಠಸ್ಯ, ಚಡ್ಡಿ ದೋಸ್ತ್, ಫ಼್ರೆಂಡ್ಸ್, ಹಲೋ ಹಲೋ ಸ್ನೇಹ ಹೀಗೇ ಹಲವು.  ಆದರೆ ಲೋಕಸ್ನೇಹ ಅವೆಲ್ಲಕ್ಕೂ ಮೀರಿದ್ದು  ಅಥವಾ ವಿಭಿನ್ನ ಅನ್ನಬಹುದು. ರೂಢಿಗೆ ರಸ್ತೆಯಲ್ಲಿ ಶಾಪಿಂಗ್ನಲ್ಲಿ ಸಿಕ್ಕಾಗ ಹಲೋ ಹಾಯ್, ಚೆನ್ನಾಗಿದ್ದೀರಾ? ಬನ್ನಿ ಮನೆಗೆ ಯಾವಾಗಾದ್ರೂ, ಅದು ಹೆಸರಿಗೆ ಆಹ್ವಾನ, ಕರೆದಿರಬೇಕು – ಆದರೆ ಬರಬಾರದು, ಇನ್ನು “ನೀವೂ ಬನ್ನಿ ನಮ್ಮನೆಗೆ” ಅನ್ನೋದೂ ಅದೇ ಅರ್ಥ ಆದರೆ ಪಾಪ “ವೀಕೆಂಡ್ ಹೋಗೋದೇ ಗೊತ್ತಾಗಲ್ಲಾರೀ, ಸಿಕ್ಕಾಪಟ್ಟೆ busy ಕಣ್ರೀ” ಇದು ಹಲೋ ಹಾಯ್ ಸ್ನೇಹ ಅನ್ನಬಹುದು. sneha 

 ಚಡ್ಡಿ ದೋಸ್ತ್ ಅನ್ನೋದು ಚಿಕ್ಕವರಾಗಿದ್ದಾಗಿಂದಾ ಸ್ನೇಹಿತರು ಅನ್ನುವುದಕ್ಕಿಂತ ಆಗ್ಲಿಂದಲೂ ಪರಿಚಯ ಇರೋರು, ಇದರಲ್ಲಿ ಸ್ನೇಹ ಅತಿ ಇಲ್ಲದಿದ್ದರೂ ಹಳೇಯ ವಿಷಯ ಮೆಲಕು ಹಾಕೊಕ್ಕೆ ಒಳ್ಳೆ ಅವಕಾಶ. ಇನ್ನು ಫ್ರೆಂಡ್ಸ್ – ಅದಕ್ಕೆ ಅರ್ಥವೇ ಇಲ್ಲ ಅನ್ನಿ, ಮಾತಾಡುವಾಗ ಬೇರೆ ಯಾರದ್ದೋ ಹೆಸರು ಕೇಳಿ ಬಂದ್ರೆ “ಓ ಅವ್ರಾ ನಮಗೆ ತುಂಬಾ ಗೊತ್ತು(ಫ್ರೆಂಡ್ಸ್) ಬಿಡಿ”, “ನಾವೆಲ್ಲಾ ಹುಟ್ಟಿ ಬೆಳೆದದ್ದು ಒಂದೇ ಊರು” (ಕಂಡವರಿಗೆಲ್ಲಾ ಒಂದೇ ಮಂತ್ರ) ಹೆಸರಿಗೆ ಫ್ರೆಂಡ್ಸ್,  ಸೇರಿದಾಗ ಬೇರೆಯವರ ವಿಷಯವೇ ಮುಖ್ಯ ಟಾಪಿಕ್.ಇನ್ನು ಗಳಸ್ಯ ಕಂಠಸ್ಯ – ಪರಿಚಯಿಸುವಾಗ ಇವರು ನಮಗೆ ಗಳಸ್ಯ ಕಂಠಸ್ಯ ಅನ್ನೋರು ಅತೀ ಕಡಿಮೆ, ಅವರಿಬ್ಬರೂ  “ಗಳಸ್ಯ ಕಂಠಸ್ಯ” ಅಥವಾ  ಏನ್ “ಗಳಸ್ಯ ಕಂಠಸ್ಯ” ಇದ್ದಂಗೆ ಇದ್ದೋರು ಅವರು, ಏನಾಯ್ತೊ ಈಗ? ಅನ್ನೋದು ಸಾಮಾನ್ಯ ಕೇಳಿಬರೋ ನುಡಿ. ಆಪ್ತಸ್ನೇಹ – ಇದು ಎಲ್ಲರನ್ನೂ ಜರಡಿ ಹಿಡಿದು ಕಡೇಯಲ್ಲಿ ಉಳಿಯುವರು, ಒಬ್ಬರೊನ್ನೊಬ್ಬರು ಬೈದಾಡಿದರೂ ಉಭಯ ವ್ಯಕ್ತಿ ಅಂತರಂಗವ ಅರಿತವರು “ಏ ಅವನು ಅಂಥವನಲ್ಲ/ಳಲ್ಲ ನಾನು ಚೆನ್ನಾಗಿ ಬಲ್ಲೆ” ಎಂದು ಸಾಧಿಸಿ ಸಾಥ್ ನೀಡುವವರು, ಸಂತೋಷ ದುಃಖ ಬಂದಾಗ ಮನಬಿಚ್ಚಿ ಹೇಳಿಕೊಳ್ಳುವುದು ಆಪ್ತರಲ್ಲಿ ಮಾತ್ರ ಸಾವಿರಕ್ಕೆ ಒಬ್ಬರೋ ಇಬ್ಬರೇ ಸಿಗಬಹುದು ಅಥವಾ ಸಿಕ್ಕಿರಬಹುದು.ಇನ್ನು ಪ್ರಾಣ ಸ್ನೇಹಿತರು ಅನ್ನೋದು ಅದೇ ಅರ್ಥ ಕೊಟ್ಟರೂ ಪ್ರತ್ಯಕ್ಷವಾಗಿ ಎಂಥಾ ನೋವಿನಲ್ಲೂ ಸ್ನೇಹ ಕೈಬಿಡದವರು,ತನು ಮನ ಧನ ಎಲ್ಲಾ ಹಂಚಿಕೊಳ್ಳುವರು. ರಾಮಾಯಣದಂಥಾ ಕಥೆಯಲ್ಲಿ ರಾಮ-ಹನುಮರ ಸ್ನೇಹ ಇದಕ್ಕೂ ಮೀರಿದ್ದು ಅನ್ನಬಹುದು, ಅಲ್ಲಿ ಸ್ನೇಹ  ಸ್ವಾಮಿನಿಷ್ಟೆಗೆ ತಿರುಗಿಬಿಡುತ್ತದೆ.ಆದರೆ ರಾಮನ ಆತ್ಮೀಯತೆ ಮಾತ್ರ ನಿಶ್ಚಲ. ಸ್ನೇಹದ ಕಥೆಗಳು ಆಶ್ಚರ್ಯ ಆನಂದ ತಂದರೆ ಒಮ್ಮೆಮ್ಮೆ ಓದಿದಾಗ ಕಣ್ಣಲ್ಲಿ ಕಾವೇರಿ ಕೆನ್ನೆಯಮೇಲೆ ಹರಿಯುತ್ತಾಳೆ. ramahanuma
      
ಸ್ನೇಹ ಚಿಗುರೊಡೆಯುವುದಾದರೂ ಹೇಗೆ? ಒಮ್ಮೊಮ್ಮೆ ಒಂದೇ ಭೇಟಿಗೇ ಸ್ನೇಹ ಮೊಳೆತು ಹೆಮ್ಮರ ಆಗಬಹುದು, ಎಷ್ಟೊ ಸಲ ಮೀಟಿದ್ದರೂ ಅದ್ಯಾಕೋ ಅವರ ವಾದ ವಿವಾದವೇ ಹಿಡಿಸಲ್ಲ, ಹತ್ತಾರು ಸಲ ನೋಡಿದ್ದರೂ ಕೆಲವರಿಗೆ ಅವರ ಹೆಸರೇ ಜ್ಞಾಪಕಕ್ಕೆ ಬರೋಲ್ಲ.ಇನ್ನು ಬಸ್ಸು ಟ್ರೈನೂ ಶಾಪಿಂಗ್ ಗಳಲ್ಲಿ ಕಂಡರೂ ಕಾಣದಂತೆ ಎಲ್ಲೋ ನೋಡಿಕೊಂಡು ಹೋಗುವವರು ಹೆಚ್ಚು ಬಿಡಿ. ದಂಪತಿಗಳು ಒಬ್ಬರು ವಿಹಾರಕ್ಕೆ ಹೊರಟಿರಲು “ಯಾಕ್ರೀ ಈ ಕಡೆ ಕರ್ಕೊಂಡ್ ಬಂದ್ರೀ?”ಅಂತ ಹೆಂಡತಿ ಕೇಳಿದಾಗ ಪತಿರಾಯರು “ಅಲ್ಲಿ ನನ್ನ ಫ್ರೆಂಡ್ ಕಾಣಿಸಿದ, ಸುಮ್ನೆ ಯಾಕೆ ಬ್ಲೇಡ್ ಹಾಕ್ತಾನೆ ಅವ” ಅನ್ನೋ ಘಟನೆ ಕಣ್ಣಾರೆ ಕಂಡದ್ದೂ ಉಂಟು. ಆದರೂ ಅವನು ಫ್ರೆಂಡ್!
ಇಷ್ಟೆಲ್ಲಾ ಮೇಲಿನ ವಿವರಣೆ ನೀಡಿದ್ದು ನನ್ನನಿಸಿಕೆ ಅನುಭವಗಳು, ಇನ್ನು ವಿಷಯಕ್ಕೆ ಬಂದರೆ ಡಿ ವಿ ಜಿ ಅವರ ಲೋಕಸ್ನೇಹವನ್ನು ಮಾನ್ಯ ಗುರುರಾಜ ಕರ್ಜಗಿ ಉಪನ್ಯಾಸದಲ್ಲಿ ಉತ್ತಮ ಉದಾಹರಣೆ ಕೊಟ್ಟು ಹೇಳುತ್ತಾರೆ. ನಾನು ಮೇಲೆ ಹೇಳಿದ್ದಾನ್ನೇ ಅವರು ಬೇರೆ ರೀತಿಯಲ್ಲಿ ಪರಿಚಯಿಸಿ ಮುಂದೆ ಒಬ್ಬ ಪ್ರಖ್ಯಾತ ಫ್ರೊಫೆಸರ್  ಲಿಯೋ ಬುಸ್ಕಾಲಿಯಾ(Leo Buscaglia) ಎನ್ನುವಾತ ಅಮೇರಿಕಾದ ಭಾಷಣಕಾರನೂ ಹೌದು ಆತ ಇಂಗ್ಲೆಂಡಿಗೆ ಹೊಗಿದ್ದಾಗ  ಮತ್ತೊಬ್ಬ ಪರಿಚಯವಿಲ್ಲದ ಪ್ರೊಫೆಸರನ್ನು (Brown) ಮೊದಲ ಬಾರಿ ಕಂಡು ಓಡಿ ಹೋಗಿ “ಹಲ್ಲೋ ಸಾರ್” ಎನ್ನುತ್ತಾನೆ, ಮೊದಲೆ ಬ್ರಿಟೀಶಿನವ ಆ ಫ್ರೊಫೆಸರ್ “Do I know you”ಎಂದು ಮುಖ ಮುರಿದು ಮುಂದೆ ಸಾಗುತ್ತಾನೆ. ಲಿಯೋ ಸುಮ್ಮನಾಗದೆ “but I know you sir”ಎನ್ನುತ್ತಾನೆ. ಆದರೆ ಫ್ರೊಫೆಸರ್ ಉತ್ತರ ” I don`t want to know you” ಎಂದು ನಿರ್ದಾಕ್ಷಿಣ್ಯವಾಗಿ ಬರುತ್ತದೆ. ಮರುದಿನ ಲಿಯೋ ಮತ್ತೆ ಅದೇ ಜಾಗದಲ್ಲಿ ಕಾದಿದ್ದು “Good morning sir, Its me.The same person you didnot want to meet yesterday, I think you know me now”ಎಂದು ಹಾಸ್ಯ ಮಾಡಿ ಕೈ ಕುಲುಕುವಂತೆ ಮಾಡುತ್ತಾನೆ.ಮುಂದೆ ಇಬ್ಬರೂ ಸೇರಿ Micro economics ವಿಷಯವಾಗಿ ಪ್ರಸಿದ್ಧ ಪುಸ್ತಕ ಬರೆಯುತ್ತಾರೆ. ಆತ ಬಲವಂತ ಸ್ನೇಹ ಮಾಡದೆ ಇದ್ದಿದ್ದರೆ ಅದು ಸಾಧ್ಯವಾಗುತ್ತಿತ್ತೇ?   leo
ಲೋಕಸ್ನೇಹ ಬಯಸುವವರು ಗುಂಡಪ್ಪನವರ ಒಂದು ಕಗ್ಗವನ್ನು ಮರೆಯುವಂತಿಲ್ಲ.
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |
ಹರುಷಕದೆ ದಾರಿಯಲೊ – ಮಂಕುತಿಮ್ಮ || ymn-murthy1

“ಪ್ರತಿಜೀವಿಯಲ್ಲೂ ಗುರುತಿಸು ಒಳಿತಿರುವುದನು, ಕೇಡುಗಳ ನಡುವೆ” ಎನ್ನುವ ಮಾತು ಇಲ್ಲಡಗಿದ್ದರೆ, ಇದೇ ಕಗ್ಗದಲ್ಲಿ ಬೇರೆ ಅರ್ಥವನ್ನೂ ಕಾಣಬಹುದು. ಒಟ್ಟಾರೆ ಹೇಳುವುದಾದರೆ ಗೆಳೆತನಕ್ಕೆ ವಯೋಮಿತಿ, ಅಂತರ, ಜಾತಿ ಧರ್ಮದ ಕಟ್ಟುಪಾಡಿಲ್ಲ, ರಾಂಗ್ ನಂಬರ್ ಬಂದವರಿಗೂ ಹಾಸ್ಯಗಾರ  Y M N ಮೂರ್ತಿ ಅರರೆ ಫೋನ್ ಇಡಬೇಡಿ ಸ್ವಲ್ಪ ತಾಳಿ! ಅಂತ ಎರಡು ಮಾತಾಡಿ, ನಗಿಸಿ ಫ಼್ರೆಂಡ್ ಆಗಿ ತಮ್ಮ ಹಾಸ್ಯ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು ಮತ್ತೊಬ್ಬ ಪ್ರೇಕ್ಷಕನ ಸಂಖ್ಯೆ  ಹೆಚ್ಚಿಸಿ ನಂತರ ಆತ್ಮೀಯರಾದ ನಿಜಸಂಗತಿ ಕೂಡಾ ಉಂಟು. ದೊಡ್ಡ ಉದ್ಯಮಿಗಳು  ಸ್ನೇಹದಿಂದ ಹೆಮ್ಮರವಾಗಿರುವ ಸುದ್ದಿಯನ್ನೂ ಕೇಳಿದ್ದೇವೆ.  ಸ್ನೇಹ ಬಯಸುವವರು ಹಗ್ಗವನ್ನು ಪ್ರತಿವ್ಯಕ್ತಿಗೆ  ಎಸೆಯುತ್ತಿರಬೇಕು, ಎಂದಿಗಾದರೂ ಸಫಲ ಆಗುವುದು ಖಂಡಿತ. ಅದೆಲ್ಲಾ ಹಾಗಿರಲಿ, “ಕೆಟ್ಟವನ ಸ್ನೇಹಕ್ಕಿಂತ ಒಳ್ಳೆಯವರ ಬಳಿ ಕಾದಾಡುವುದೇ ಲೇಸು” ಎನ್ನುವ ಗಾದೆ ಮರೆಯಲಾಗುವುದೇ.

ಜೀವನೋತ್ಸಾಹ

ಕನ್ನಡದ ಭಗವದ್ಗೀತೆ ಎಂದೇ ಖ್ಯಾತಿಯಾದ ಮಂಕುತಿಮ್ಮನ ಕಗ್ಗಗಳನ್ನು ಬರೆದ ಡಿ ವಿ ಗುಂಡಪ್ಪನವರ ಮತ್ತೊಂದು ಸಣ್ಣ ಪುಸ್ತಕ “ಬಾಳಿಗೊಂದು ನಂಬಿಗೆ” ಓದಿದ ನೆನಪು ಇನ್ನೂ ಹಸಿರಾಗೇ ಇದ್ದಾಗ ಇತ್ತೀಚೆಗೆ ಗುರುರಾಜ ಖರ್ಜಗಿ ಅವರ ಈ ಪುಸ್ತಕದ ಕುರಿತ ಉಪನ್ಯಾಸ ಕೇಳುವ ಅವಕಾಶ ಇದೇ ನಾಲ್ಕು ವರ್ಷದ ಕೆಳಗೆ ಒದಗಿತು.ju2

ಹಿಂದೊಮ್ಮೆ ಬೆಂಗಳೂರಿನಲ್ಲಿ ನಾಲ್ಕು ದಿನ ನಡೆದ ಉಪನ್ಯಾಸ ಕನ್ನಡ ಆಡಿಯೋ.ಕಾಂ ನಲ್ಲೂ ಕೇಳಲು ಲಭ್ಯವಿದೆ.ಕೇಳಲು ಶುರು ಮಾಡಿಕೊಂಡರೆ ನಿಲ್ಲಿಸಲು ಮನಸ್ಸೇ ಬರೋಲ್ಲ ಅನ್ನಿ, ಡಿ ವಿ ಜಿ ಪುಸ್ತಕ, ಖರ್ಜಗಿ ಮಾತು, ಎಂಥಾ ಕಾಂಬಿನೇಶನ್ ವಾಹ್ ! ಉಪನ್ಯಾಸದ/ವಿವರಣೆಯ ಒಂದು ಭಾಗದಲ್ಲಿ ಮೂರು ವಿಷಯದ ಪ್ರಸ್ತಾಪ ಮಾಡುತ್ತಾರೆ. ಜೀವನೋತ್ಸಾಹ, ಪುರುಷಪ್ರಯತ್ನ, ಲೋಕಸ್ನೇಹ.  ಪ್ರತಿ ವಿವರಣೆಗೂ ಉದಾಹರಿತವಾಗಿ ಒಂದೊಂದು ಅನುಭವ ಅಥವಾ ಘಟನೆ ಕೊಟ್ಟು ಕೇಳುಗರ ಮನಸ್ಸಿಗೆ ನಾಟುವ ವಾಕ್ ಚಾತುರ್ಯ ಖರ್ಜಗಿ ಅವರದ್ದು. ಅಲ್ಲಲ್ಲಿ ತಕ್ಕ ಕಗ್ಗದ ಉಲ್ಲೇಖ, ಅದರ ಸಾರಾಂಶ ಅಥವಾ ಪದ ಪದ ವಿಂಗಡಿಸಿ ಅರ್ಥ-ಅದಕ್ಕೊಂದು ಕಥೆ-ಉಪಕಥೆ, ಹೀಗೇ ಒಟ್ಟಿನಲ್ಲಿ ಇಂಚಿಂಚಿಗೂ ಕೊಂಚವೂ ಬೋರ್ ಆಗದ ಅವರ ಪ್ರವಚನ. ಅದರಲ್ಲಿ ಒಂದಾದ ಜೀವನೋತ್ಸಾಹದ ಬಗ್ಗೆ ಅವರು ಹೇಳಿದ ಮಾತಿನ ನೆನಪು ಹಂಚಿಕೊಳ್ಳುವ ಪುಟ್ಟ ಪ್ರಯತ್ನ ಇದು.

handicapped

ಮನುಷ್ಯ ಅಂದಮೇಲೆ ಒಂದಲ್ಲ ಒಂದು ತೊಂದರೆ,ಅನಾರೋಗ್ಯ,ಅಂಗವಿಕಲತೆ,ಅನಾನುಕೂಲ,ನ್ಯೂನತೆ ಯಾವುದಾದರೂ ಬೆನ್ನಹಿಂದೆಯೇ ಕಟ್ಟಿಕೊಂಡು ಹುಟ್ಟಿರುತ್ತೇವೆ, ಎಲ್ಲಾ ಅನುಕೂಲಗಳಿದ್ದವರಿಗೆ ಸೋಮಾರಿತನ ಕಾಡುತ್ತಿರುತ್ತದೆ. “ಅನುಗಾಲವು ಚಿಂತೆ” ಎಂಬ ಪುರಂದರ ನುಡಿ ಇಲ್ಲಿ ಜ್ಞಾಪಕಕ್ಕೆ ಬರುತ್ತದೆ,  ಜೀವನ ಸಾಗಿಸುವುದು ಮಾತ್ರವಲ್ಲದೆ, ಗುರಿಸೇರುವುದಿರಲಿ, ದಿನ ನಿತ್ಯದ ಕೆಲಸ ಸಾಗಿಸುವುದೇ ಕೆಲವರಿಗೆ ಈ ತೊಂದರೆಗಳು ಅಡ್ಡಿಯಾಗುತ್ತವೆ. ಹೀಗಿರುವಾಗ ಅದ್ಯಾವುದನ್ನೂ ಲೆಕ್ಕಿಸದೆ, ದೂರದೇ , ದೂಷಿಸದೇ ಇಟ್ಟ ಗುರಿಮುಟ್ಟುವ ಅಥವಾ ಇದ್ದಷ್ಟು ದಿನ ತಲೆಯೆತ್ತಿ ನಿಲ್ಲುವ ಉತ್ಸಾಹಕ್ಕೆ ಹತ್ತಾರು ಉದಾಹರಣೆ ಕೊಡುತ್ತಾರೆ,ಅದರಲ್ಲಿ ಎರಡು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ವಿಶಾಲವಾದ ಮರ, ಮರದ ತುಂಬ ಎಲೆ,ಹೂಗುಚ್ಚ. ಹೂವರಳಿ ಹಣ್ಣಾಗಿ ಹಣ್ಣೊಡೆದು  ಬೀಜವಾಗಿ ಹೊರಬರಲು, ಬೀಸಿದ ಗಾಳಿಗೆ ಹಾರುತ್ತಾ, ಅಲ್ಲಿಲ್ಲಿ ತೇಲುತ್ತಾ ಓಡಾಡುವ ವಾಹನದಮೇಲೆ ಬಿದ್ದು, ಬೇರಾವುದೋ ಊರಲ್ಲಿ ಎದ್ದು, ಯಾವುದೋ ವಸ್ತುವನ್ನೇರಿ, ಕಟ್ಟಡದ ಕಲ್ಲಿನ ಮೆಟ್ಟಿಲಿನ ಮೂಲೆ ಸೇರಿ, ನಡೆದಾಡುವವರ ಚಪ್ಪಲಿಯ ತುಳಿತಕ್ಕೆ ಸಿಕ್ಕದೆ ನಿಟ್ಟುಸಿರು ಬಿಡುತ್ತಾ ಅವಿತಿರಲು, ಗಾಳಿ,ಚಳಿ,ಪೊರಕೆಗೆ ತಾಗದಂತೆ ಇದ್ದು, ಅಲ್ಲೇ ಬಿದ್ದ ಮಳೆ, ಇದ್ದ ಧೂಳು ಆಶ್ರಯ ಪಡೆದು ಬೀಜ ಚಿಗುರೊಡೆದು ಪುಟ್ಟ ಸಸಿ-ಗಿಡ-ಮರ-ಹೆಮ್ಮರವಾಗಿ ಬೆಳೆದು ಬಿಡುತ್ತದೆ.tree in NorthSydney

ಹೆಂಚಿನ ಮನೆಯ ಮೇಲಿನ ಅಂಚಿನಲ್ಲಿ, ನೀರು ಹರಿಯಲು ಕಟ್ಟಿದ ಗಟ್ಟರ್ ಗಳ ಮೇಲೆ ಗಿಡಗಳು ಕೈಲಾದಷ್ಟು ಕಾಲ ಬದುಕುವ ಉತ್ಸಾಹದಿಂದ ಬೆಳೆಯುತ್ತವೆ. ದೊಡ್ಡ ಬೆಟ್ಟದಲ್ಲಿನ ಗಾತ್ರದ ಬಂಡೆಗಳ ಮೇಲಿನ ಬೊಗಸೆ ಗಾತ್ರದ ತಗ್ಗಿನಲ್ಲಿ ಗಾಳಿಗೆ ಬಂದ ಧೂಳಿನಲ್ಲೇ ಮೊಳಕೆ ಮೇಲೆದ್ದು ತಲೆ ಎತ್ತಿ ನಿಲ್ಲುವ ಹುಲ್ಲುಗಳು ಇದಕ್ಕೆ ಮತ್ತೊಂದು ಉದಾಹರಣೆ,north sydney

ಮುಂದುವರೆಸುತ್ತಾ ಅವರು  ವಿದ್ಯಾವರ್ಧಕ ಕಾಲೇಜಿನ ಲಲಿತ ಎಂಬ ಹುಡುಗಿಗೆ ಅನಾರೋಗ್ಯವಿದ್ದರೂ, ಮೈತುಂಬಾ ಚರ್ಮದ ಖಾಯಿಲೆ ಇದ್ದರೂ, ರಜೆ ಹಾಕಲು ಸಾವಿರ ಕಾರಣವಿದ್ದರೂ ಒಂದು ದಿನವೂ ತಪ್ಪದೆ ಪಾಠ ಕೇಳಲು ಬರುತ್ತಿದ್ದಳು, ಆಕೆಗಾಗಿ ಮಹಡಿಯ ಮೇಲಿದ್ದ ತರಗತಿಯನ್ನು ನೆಲಮಾಳಿಗೆಗೆ ವರ್ಗಾಯಿಸಲಾಯಿತು, ಛಲ ಬಿಡದೆ CA ಮಾಡಲು ಪಣತೊಟ್ಟ ಆಕೆ ಕಡೆಗೂ ತನ್ನಾಸೆ ನೆರವೇರಿಸಿಕೊಳ್ಳುತ್ತಾಳೆ. ತಂದೆಯ ವ್ಯಾಪರ ಎರಡು ವರ್ಷ ಯಸಸ್ವಿಯಾಗಿ ನಡೆಸುತ್ತಾಳೆ. ಮುಂದೆ ಸಾವಿನ ಸುದ್ದಿ… ಈ ವಿವರಣೆ ಅವರ ಬಾಯಿಂದ ಕೇಳಿದರೇ ಚೆನ್ನ, ಮೈ ಜುಂ ಎಂದು ಕಣ್ತುಂಬಿ ಬರುತ್ತದೆ. ಇಂತಹ ಹತ್ತಾರು ಘಟನೆ ಈ ಉಪನ್ಯಾಸದಲ್ಲಿ ಕೇಳಿಬರುತ್ತವೆ, ಕೈಕಾಲು ನೆಟ್ಟಗಿದ್ದ ಮಕ್ಕಳು ಏನಾದರೊಂದು ನೆವ ಹೇಳಿ ಶಾಲಾಕಾಲೇಜಿಗೆ ಚಕ್ಕರ್ ಹಾಕುವವರಿಗೆ ಒಮ್ಮೆ ಈ ತರಹದ ಅನುಭವದ ಮಾತು ಕೇಳಲು ಅವಕಾಶ ಮಾಡಿಕೊಡಬೇಕು.ju

ಮಿಕ್ಕೆರೆಡು ವಿಷಯಗಳಾದ ಲೋಕಸ್ನೇಹ ಮತ್ತು ಪುರುಷಪ್ರಯತ್ನವನ್ನೂ ಪರಿಚಯಿಸುವ ಪ್ರಯತ್ನ ಮುಂದಿನ ಬ್ಲಾಗ್ ಪೋಸ್ಟ್ ನಲ್ಲಿ ಮಾಡುವೆ.

ಈ ದ್ವನಿಸುರಳಿಯನ್ನು ನನ್ನ ಹಲವಾರು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದೇನೆ. ಪ್ರತಿಯೊಬ್ಬರೂ ಆನಂದ-ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ನನ್ನ ಜೀವನದಲ್ಲಿ ಬದಲಾವಣೆ ತಂದ ಈ ದ್ವನಿ ಸುರಳಿ ತಮಗೂ ಕೇಳಲು ಇಷ್ಟವಿದ್ದರೆ ಕಳಿಸಿಕೊಡುತ್ತೇನೆ.

ಕಮ್ ಜಾತಿ ಜನ

ಸವಿ ನೆನಪುಗಳು ಹೇಗೆ ಅಳಿಯದೇ ಉಳಿಯುತ್ತವೆಯೋ ಹಾಗೇ ಕಹಿ ನೆನಪೂ ಕೂಡಾ.ನನ್ನ ಒಂದು ಅಂಥಾ ನೆನಪು ಹಂಚಿಕೊಳ್ಳುವ ಪ್ರಯತ್ನ ಈ ಪೋಸ್ಟ್. ನಾವು ಸುಖದಲ್ಲಿದ್ದಾಗ ಕಹಿ ಅನುಭವವನ್ನು ದೂಶಿಸಿ ದೂರ ಇಡುತ್ತೇವೆ, ಮರೆತೂ ಬಿಡುತ್ತೇವೆ ಅದೇ ಕಷ್ಟದಲ್ಲಿರಲು ಆ ಘಟನೆ ಅನುಭವವಾಗಿ ಅದರಿಂದ ಪಾಠಾನೋ, ನೀತಿನೋ ಕಲಿತಿರಲೂ ಬಹುದು. ಅಚ್ಚಳಿಯದೇ ಉಳಿದ ಅಂತಹ ಒಂದು ನೆನಪು ಇದು.

bike
ಸುಮಾರು ಎರಡೂವರೆ ದಶಕದ ಹಿಂದಿನ ವಿಷಯ. ಒಮ್ಮೆ ನನ್ನ ಅಣ್ಣ (ಭಕ್ತ ವತ್ಸಲ) ಮತ್ತು ಅವನ ಗೆಳೆಯರ ಜೊತೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ (Up & down) ಮೂರೇ ದಿನಗಳಲ್ಲಿ  ! ಸೈಕಲ್ ಸವಾರಿ ಮಾಡುವ ಸಾಹಸ ನಾನು ಮಾಡಿದೆ. ಆ ಮೊದಲು ನನ್ನ ಗೆಳೆಯರ ಜೊತೆ (ಈಗ ಸಿಡ್ನಿಯಲ್ಲೂ ಇದ್ದು ಸಂಪರ್ಕದಲ್ಲಿದ್ದಾರೆ) ಕರ್ನಾಟಕದ ಸಾಕಷ್ಟು ಜಿಲ್ಲೆಗಳನ್ನು ಸುತ್ತಿ ಬಂದಿದ್ದೆ,ಅದರಿಂದ ನನಗೂ ಸೈಕಲ್ ತುಳಿಯುವ ಶಕ್ತಿ ಇದೆ ಅಂತ ಈ ಪ್ರವಾಸಕ್ಕೆ ಧೈರ್ಯ ಮಾಡಿದೆ.ನನ್ನ ಅಣ್ಣನ ಗೆಳೆಯರು ನನಗಿಂತ ಮೂರು-ನಾಲ್ಕು ವರ್ಷ ಹಿರಿಯರು, ಆ ಗುಂಪಿನಲ್ಲಿ ನಾನೇ ಕಿರಿಯ, ಎಲ್ಲರೂ ಗರಡಿಮನೆ ಪೈಲ್ವಾನರು ಇದ್ದಹಾಗೆ ಇದ್ದರು. ಸರಿ ಮೊದಲ ದಿನವೇ ಬೆಂಗಳೂರಿನಿಂದ ಹೊರಟು ಸಕಲೇಶಪುರ (235km) ತಲುಪುವ ಯೋಜನೆ! ಬೆಳಿಗ್ಗೆ ಐದಕ್ಕೇ ಬೆಂಗಳೂರು ಬಿಟ್ಟು ಕುಣಿಗಲ್ ಏಳರ ಹೊತ್ತಿಗೇ ತಲುಪಿದೆವು. ಏನು ರೇಸಿಂಗೋ ರೇಸಿಂಗು ಚಳಿಗೆ, ಮೊದಲ ದಿನದ ಹುರುಪಿಗೆ, ಯಾರಿಗೂ ಸುಸ್ತು ಅನ್ನಿಸಲಿಲ್ಲ. ಹಳ್ಳಿಯ ಚಿಕ್ಕ ಹೋಟೆಲೊಂದರಲ್ಲಿ ಗಡದ್ದಾಗಿ ಇಡ್ಲಿ ವಡೆ ಬಾರಿಸಿ ಮುಂದೆ ಸಾಗಿದೆವು ಅಕಸ್ಮಾತ್ ನಾನು ನನ್ನ ನೀರಿನ ಬಾಟಲ್ ನ್ನು ಕುಣಿಗಲ್ ನಲ್ಲಿ ತಿಂಡಿ ತಿನ್ನುವಾಗ ಅಲ್ಲೇ ಬಿಟ್ಟು ಮರೆತು ಬಂದೆ, ಸುಮಾರು ಇಪ್ಪತ್ತು ಕಿ ಮೀ ತಲುಪುವ ವೇಳೆಗೆ ಬಿಸಿಲು, ಗಾಳಿಗೆ ದೇಹ ದಣಿದು ನೀರು ಬೇಕನಿಸಿತು, ನೀರಿನ ಬಾಟಲ್ ತಡಕಾಡಿದೆ ಎಲ್ಲಿ? ಕುಣಿಗಲ್ ನಲ್ಲೇ ಬಿಟ್ಟು ಬಂದಿದ್ದೆ, ಸಹ-ಸವಾರರನ್ನು ಕೇಳೋಣವೆಂದರೆ ಆ ಕ್ಷಣ ನಾನು ಹಿಂದೆ ಉಳಿದಿದ್ದೆ ನನಗೆ ಅವರು ಕಂಡರೂ ಕೂಗಿದರೆ ಕೇಳದಷ್ಟು ದೂರವಿದ್ದರು.ಬೆಗ ಅವರನ್ನು ತಲುಪುವ ಆಸೆಯಿಂದ ಜೋರಾಗಿ ಪೆಡಲ್ ತುಳಿದೆ,ದಣಿವಾಯಿತೇ ಹೊರತು ಅವರನ್ನು ಮುಟ್ಟಲಿಲ್ಲ.
madake1

ಸರಿ ಅಲ್ಲೇ ಪಕ್ಕದಲ್ಲಿ ಪುಟ್ಟ ಹಳ್ಳಿ ಕಂಡಿತು. ನನ್ನ ಅದೃಷ್ಟಕ್ಕೆ ಒಬ್ಬ ಬಡ ಹುಡುಗ ಅವನ ಚಿಕ್ಕ ಮನೆಯ ಬಾಗಿಲಿಗೆ ಒರಗಿ ನಿಂತಿದ್ದ. ಸೈಕಲ್ ನಿಲ್ಲಿಸಿ “ಏ ಹುಡುಗಾ ಒಂದ್ ಲೋಟ ನೀರು ಕೊಡ್ತೀಯಾ?” ಅಂತ ಕೇಳಿದೆ, ಹುಡುಗ ನನ್ನ ಮುಖ ನೋಡಿ ಅರೆ ಕ್ಷಣ ಸುಮ್ಮನಿದ್ದು ನಂತರ ಒಳಗೆ ಹೋಗಿ ನೀರು ತಂದ, ಪುಟ್ಟ ಮಡಕೆ…. ಪರವಾಗಿಲ್ಲ ಮಡಕೆಯಲ್ಲಿ ಕುಡಿಯುವ ಲಕ್ ಇವತ್ತು ಅಂತ ನಾನೂ ಅವನ ಮನೆಯಕಡೆಗೆ ಹೆಜ್ಜೆ ಹಾಕಿದೆ,ಅವನೂ ನನ್ನಕಡೆ ಬರುತ್ತಿದ್ದ. ಅಷ್ಟರಲ್ಲಿ ಎಲ್ಲಿಂದಲೋ ಒಬ್ಬ ಹಿರಿಯ ಗಂಡಸು ಓಡಿಬರುತ್ತಾ “ಏಯ್ ಏಯ್ ಓಗಾ… ಓಗಾ…. ಓಗಾಲೈ” ಅಂತ ಗಟ್ಟಿಯಾಗಿ ಪ್ರಾಣಿಯನ್ನು ಅಟ್ಟುವಂತೆ ಅರಚಿದ. ನನಗೆ ಭಯವಾಯಿತು ಇದೇನಪ್ಪ ನೀರು ಕುಡಿಯೋಕ್ಕೆ ಬಂದ್ರೆ ಹಿಂಗಾಡ್ತಾರೆ ಅಂದ್ಕೊಡೆ,ಆದರೆ ಅಲ್ಲಿ ನಡೆದದ್ದೇ ಬೇರೆ. ಆತ ಓಗಾ ಓಗಾಲೈ ಅಂತ ಗದರಿದ್ದು ಆಪುಟ್ಟ ಹುಡುಗನ್ನ. ಆ ಪುಟ್ಟ ಹುಡುಗ ಮಡಕೆ ಹಿಡಿದು ಬಂದ ಕಡೆಗೆ ಹಿಂತಿರುಗಿ ನಡೆದು ತನ್ನ ಮನೆಯೊಳಕ್ಕೆ ಹೋದ, ಈತ ಕೂಡಾ ಬಂದ ಕಡೆಗೆ ತಿರುಗಿ ಹೊರಟ, “ಏನ್ ಸ್ವಾಮೀ…. ನನಗೆ… ಬಾಯಾರಿಕೆ…. ಅವನು…. ನೀರು….” ಅಂತ ಹೇಳುವಷ್ಟರಲ್ಲಿ ಆತ ಹೇಳಿದ್ದು ಒಂದೇ ಮಾತು “ಅವ್ರು ಕಮ್ ಜಾತಿ ಸಾಮೀ ಓಗಿ “* ಅಷ್ಟೇ ! ನಾನು ಅರೆಕ್ಷಣ ಬೆಪ್ಪಾಗಿ ನಿಂತೆ, ನಾನು ಕುಡಿಯೋಕ್ಕೆ ರೆಡಿ ಇರೋನೇ……….ಅಂತ ಹೇಳೋಕ್ಕೆ ಹೊರಟಿದ್ದೆ, ಅವನು ದೂರಕ್ಕೆ ಹೋಗುವ ಮೊದಲೇ ಭಿಕ್ಷದೋರ್ ಥರ “ಸ್ವಾಮೀ ನೀರು?” ಅಂತ ಆಶ್ಚರ್ಯದಿಂದ ಕೇಳಿದೆ. ಅದಕ್ಕೆ ಆತ ಉತ್ತರಿಸಲೇ ಇಲ್ಲ. ಅಲ್ಲಾ ತಾನೂ ಕೊಡಲಿಲ್ಲ ಹುಡುಗ ಕೊಡುವುದನ್ನೂ ತಪ್ಪಿಸಿದ ! ಕಡೆಗೆ ಮುಂದಿನ ಊರಲ್ಲಿ ನಾನೇ ಬೋರ್ ವೆಲ್ ಪಂಪ್ ಒತ್ತಿ ಬೊಗಸೆ ಹಿಡಿದು ಕುಡಿದಿದ್ದಾಯ್ತು.ಆದರೆ ಆ ಘಟನೆ ಮಾತ್ರ ಇಂದಿಗೂ ಮರೆತಿಲ್ಲ. ಜಾತಿ ಕೀಳರಿಮೆ ಎಷ್ಟರ ಮಟ್ಟಿಗೆ ಹಳ್ಳಿಗಳಲ್ಲಿ ಇತ್ತು ಎನ್ನುವ ಅರಿವು ಅಂದು ನನಗಾಯ್ತು. neeru2
ಮಲೆನಾಡಿನ ಗಡಿ ದಾಟಿದಮೇಲೆ ತಿರುವುತಿರುವಿನಲ್ಲೂ ಜಲಪಾತ, ನೀರಿಗೆ ಕೊರತೆಯೇ ಇಲ್ಲ ಬಿಡಿ. ಆ ದಿನ ಸಕಲೇಶಪುರ ಸೇರಬೆಕಿದ್ದ ನಾವು ಎದಿರುಗಾಳಿ ಬಿಸಿಲಿನ ಬೇಗೆಗೆ ಹಾಸನ ಮುಟ್ಟಿದೆವು.ಮತ್ತೆ ಬೆಳಿಗ್ಗೆ ಬೇಗೆದ್ದು ಬೆಳಕು ಹರಿಯುವ ಮುನ್ನ ಸಕಲೇಶಪುರ ತಲುಪಿ ಆರು ಗಂಟೆಯ ಸಮಯದಲ್ಲಿ ಶಿರಾಡಿ ಘಾಟ್ ನಲ್ಲಿ ಚುಮುಚುಮು ಚಳಿಯಲ್ಲಿ ಸುಂದರ ಗಿರಿವನಗಳ ನಡುವೆ ಸೈಕಲ್ ಸವಾರಿ ಮಾಡಿದ್ದು ಮರೆಯಲಾಗದ ಚಿನ್ನದಂತಾ ಅನುಭವ ಚಿತ್ರಣ ಇನ್ನೂ ಮನಸ್ಸಿನಲ್ಲಿ ಮಾಸಿಲ್ಲ.

ಜೀಸಸ್ ಕ್ರೈಸ್ಟ್ ! ಮುದುಕಿಯ ಪ್ರಾಣ ಪಕ್ಷಿ ?

2009 August ಆಗ ಸಿಡ್ನಿ ಸಿಟಿಯಲ್ಲಿ ಕೆಲಸ, ಬೆಳಿಗ್ಗೆ ಸಿಟಿರೈಲ್ ಹಿಡಿದು ಹೊರಟೆ. ಅದರ ಅನುಭವ ಬಲ್ಲವರೇ ಬಲ್ಲರು ಬಿಡಿ,  ಏಳರಿಂದ ಎಂಟರ ಒಳಗೆ ರೈಲು ಹತ್ತಿದರೆ ಆಫೀಸಿಗೆ ಹೋಗುವವರೇ ಹೆಚ್ಚಾಗಿ ತುಂಬಿರುವ ಸಮಯ, ಅಲ್ಲಲ್ಲಿ ಶಾಲಾ ಮಕ್ಕಳ ಗುಂಪು, ಕಿವಿಗೆ ಮ್ಯೂಸಿಕ್ ಚುಚ್ಚಿಕೊಂಡು ತಲೆಯಾಡಿಸುವವರು ಕೆಲವರಾದರೆ, ಫೋನಿನಲ್ಲಿ ಅರಿಯದ ಭಾಷೆಯಲ್ಲಿ ಅರಚಿಕೊಳ್ಳುವವರು ಕೆಲವರು.ಬೆರಳುಗಳಿಗೆ ಬಿಡುವಿಲ್ಲದೆ ಟೆಕ್ಟ್ ಮಾಡುವವರೇ ಹೆಚ್ಚು ಅನ್ನಿ. ರೈಲಿನಲ್ಲೇ ತಿಂದು ಕುಡಿದೂ ತೂಕಡಿಸುವವರೂ ಸಾಮಾನ್ಯ. ಪೇಪರ್, ಪುಸ್ತಕ ಓದುವುದು ಒಂದು ಒಳ್ಳೆಯ ಹವ್ಯಾಸವೇ ಸರಿ, ಓದುತ್ತಾ ಪೇಪರ್ ಛತ್ರಿ ಪುಸ್ತಕ ಮರೆತು ಇಳಿದು ಹೋಗುವವರೂ  ಅದೆಷ್ಟೋ ಮಂದಿ.train journey

ಆ ದಿನ ನನಗೆ ಒಬ್ಬ ಇಳಿವಯಸ್ಸಿನ ಮುದುಕಿಯ ಮುಂದಿನ ಸೀಟಿನಲ್ಲಿ ಜಾಗ ಸಿಕ್ಕಿತು. ಎದಿರು ಬದಿರು ಸೀಟು. ನನಗೇನು ನಾರ್ತ್ ಸಿಡ್ನಿ ತಲುಪಿದರೆ ಸಾಕು ಬೇರೆಲ್ಲೂ ಜಾಗ ಇಲ್ಲದ ಕಾರಣ ಆಕೆಯ ಎದುರೇ ಕುಳಿತೆ.ಮುಖಾಮುಖಿ ಅರೆ ನಾನ್ಯಾಕೆ ಆಕೆಯ ಕಡೆ ನೋಡಲಿ ಅಂತ ಬೀಚಿಯವರ ಪುಸ್ತಕ ಹಿಡಿದು ಓದಲಾರಂಭಿಸಿದೆ. ಹಳೆಯದು ಅನ್ನುವ ಹಾಗಿಲ್ಲಬಿಡಿ ಈಗಲೂ ಅವರ ಜೋಕು ಅದೆಷ್ಟು ಅನ್ವಯ ನಮ್ಮ ದೇಶದ ಜೀವನ ಶೈಲಿ ಗೊತ್ತಿರಬೇಕು ನಿಜವಾಗಲೂ ನಗಬೇಕು ಅಂದರೆ. ಬೀಚಿ ಪದ ಪದ ಗಳಲ್ಲಿ ನಗಿಸಿದರೆ ಹೀರಣ್ಣಯ್ಯನವರು ಮಾತು ಮಾತಿಗೂ ನಗಿಸುತ್ತಾರೆ.ಅವರಿಬ್ಬರೂ ಸ್ನೇಹಿತರು ಎನ್ನುವುದು ಇತ್ತೀಚಿಗೆ ಮಾ| ಹಿರಣ್ಣಯ್ಯನವರ ಜೊತೆ ಈಮೈಲ್ ಸಂದೇಶಗಳಿಂದ ತಿಳಿದಿತ್ತು.ಎಲ್ಲಾ ನೆನೆಯುತ್ತಾ ಆಗಿಂದಾಗ್ಗೆ ಯಾವ ನಿಲ್ದಾಣಕ್ಕೆ ತಲುಪಿದ್ದೇವೆ ಅಂತ ಹೊರಗೊಮ್ಮೆ ಕಣ್ ಹಾಯಿಸುತ್ತಿದ್ದೆ.

ಅಲ್ಲಿ ಮತ್ತೊಂದು ದೃಷ್ಯ ನನ್ನನ್ನು ಸೆಳೆಯಿತು. ಮತ್ತೊಂದು ಮುಖ್ಯ ವಿಷಯ ಮರೆತಿದ್ದೆ. ಏನಪ್ಪಾ ಅಂದ್ರೆ ಮೇಕಪ್ಪು ಹೂ ಹೌದು ಕಣ್ರೀ ಅದೇನ್ ಮಾಡ್ಕೋತಾರೆ ಅಂತೀನಿ ಜನ ಬೆಳಿಗ್ಗೆ ಎದ್ದು ಸ್ನಾನಮಾಡಿ ತಲೆ ಒಣಗಿಸಿಕೊಂಡು ಸದ್ಯ ಬಟ್ಟೆ ಏರಿಸಿಕೊಂಡು ಮಿಕ್ಕ ಎಲ್ಲಾ ಮುಖದ ಸೌದರ್ಯ ಅಲಂಕಾರವನ್ನ ರೈಲಿನಲ್ಲೇ ಮಾಡ್ಕೋತಾರೆ.ಅಬ್ಬ! ಒಂದೊಂದೇ ಸಲಕರಣೆ ಕೈಚೀಲದಿಂದ ಹೊರಗೆ ಬರತ್ತೆ. ಬಳಸಿದ ಮೇಲೆ ಎಲ್ಲಾ ಭದ್ರವಾಗಿ ಅಚುಕಟ್ಟಾಗಿ ಮುಚ್ಚಳ ಮುಚ್ಚಿಡೋದು ಬೇರೆ ನೋಡೋಕ್ಕೇ ಚೆನ್ನ ಬಿಡಿ, ಮುಖಕ್ಕೆ ,ಹಣೆಗೆ, ತುಟಿಗೆ ಕಣ್ಣಿಗೆ ಏನೇನೋ ಮೆತ್ಕೊಂಡು,  ಕೈಗನ್ನಡಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಾ ಆಚೆ ಈಚೆ ಬಂದವರನ್ನು ನೋಡುವ ಪರಿಯೇ ಚೆನ್ನ. makeup1

ajji

ಈ ಅಜ್ಜಿ ಕೂಡಾ ಮೇಕಪ್ ಮಾಡಕ್ಕೆ ಶುರು ಮಾಡಿತು.ಸುಮಾರು ಹತ್ತದಿನೈದು ನಿಮಿಷ. ಎಲ್ಲಾ ಮುಗಿಸಿ ಕನ್ನಡಕವನ್ನೂ ಏರಿಸಿ, ಮೂಗಿನ ತುದಿಗೆ ಸರಿಸಿ ಕೈಯಲ್ಲಿ ಪುಸ್ತಕ ಇರಿಸಿ, ಅದೇನ್ ಆಸಕ್ತಿ ಅಂತೀರಾ ಎಷ್ಟೊತ್ತಾದರೂ ಒಂದೇ ಪುಟ, ಮುಂದೆ ತಿರುವು ಹಾಕಲೇ ಇಲ್ಲ. ಪುಸ್ತಕವೇನೂ ದೊಡ್ಡ ಗಾತ್ರದ್ದಲ್ಲ.ನನಗೆ ಒಂದ್ಕಡೆ ಭಯ ಮತ್ತೊಂದ್ ಕಡೆ ಕುತೂಹಲ, ಅಜ್ಜಿ ಅಲ್ಲಾಡ್ತಾ ಇಲ್ಲ ಅಯ್ಯೋ ಕೂತ್ಕಡೇನೇ ಏನಾದ್ರೂ ಗೊಟಕ್? “ಯಪ್ಪಾ ಸಿವ ಸಿವ ಬೇಡಪ್ಪಾ ನನ್ನ ಕಣ್ಮುಂದೆ ಹಾಗಾಗೋದು” ಅಂದ್ಕೊಂಡೆ ಹಾಗೇ ನನ್ನ ಕಾಲ್ಚೀಲ ಸರಿಮಾಡಿಕೊಳ್ಳುವ ನೆಪದಲ್ಲಿ ಆಕೆ ಹಿಡಿದ ಬುಕ್ ನೋಡಿದೆ “ಬೈಬಲ್ಲು !” ಜೀಸಸ್ ಕ್ರೈಸ್ಟ್ ! bible

ಅಷ್ಟರಲ್ಲಿ ಒಂದು ನಿಲ್ದಾಣ ಬಂತು, ರೈಲಿನ ಬ್ರೇಕ್ ಹಾಕಿದರೂ ಅಜ್ಜಿ ಅಲ್ಲಾಡ್ಲಿಲ್ಲ, ಅಯ್ಯೋ ಈ ಸ್ಟೇಷನಲ್ಲೇ ಇಳೀಬೇಕಿತ್ತೇನೋ ಮುದುಕಿ ಅಂತ ಕೇಳೋಣ ಅನ್ನಿಸಿತು, ಅಲ್ಲ ನಮಗ್ಯಾಗೆ ಇದ್ದೀತು ಅಂತ ಸುಮ್ಮನಿರೋ ಮನುಷ್ಯ ನಾನಲ್ಲ, ಏನೋ ಸಹಾಯ ಆಗ್ಬೋದು……..ಹೀಗೇ ಯೋಚಿಸುತ್ತಿದ್ದೆ ಟ್ರೈನ್ ಎರಡೂ ಮೂರು ಸ್ಟೇಷನ್ ದಾಟಿತು, ಅಜ್ಜಿ ಮಾತ್ರ ಅದೇ ಪುಟ ಸುಮಾರು ಹೊತ್ತು ಕಳೆದರೂ ತುಟಿಕ್ ಪಿಟಿಕ್ ಇಲ್ಲ.ಯಾವ ಸ್ಟೇಶನ್ ಅಂತ ಅನೌನ್ಸೇನೋ ಮಾಡ್ತಿದ್ರೂ ಅನ್ನಿ, ಅಲ್ಲ ಎಲ್ಲಿಗೆ ಬಂದಿದ್ದೀವಿ ಅಂತಾನಾದ್ರೂ ಒಂದೊಂದು ಸಾರಿ ತಲೆ ಎತ್ತಿ ನೋಡ್ಬಾರದೇ? ಎರಡು ದಿನದ ಕೆಳಗೆ ತಾನೇ ಓದಿದ್ದೆ ಯಾರೋ “ಕೂತಕಡೇನೇ ಪ್ರಾಣ ಬಿಟ್ಟರು” ಅಂತ, ಹಿಂದೊಮ್ಮೆ” ಅಂದು ರಾತ್ರಿ ಮಲಗಿದವರು ಮೇಲೆ ಏಳಲೇ ಇಲ್ಲ” ಅನ್ನೋದೆಲ್ಲಾ ಜ್ಞಾಪಕ ಬಂತು ಅಷ್ಟರಲಿ ನಾನಿಳಿಯುವ ನಿಲ್ದಾಣ ಬಂದೇ ಬಿಟ್ಟಿತು, ಇಳಿಯೋಕ್ಕೆ ಮೊದಲು ಪಾಪ ಅಜ್ಜೀನ ಒಮ್ಮೆ ಬದುಕಿದೆಯೋ ಇಲ್ವೋ ಅಂತ ಖಾತರಿ ಮಾಡ್ಕೊಳ್ಳೋಣ, ಅಂತ ಧೈರ್ಯ ಮಾಡಿದೆ,excuse me ಎಂದೆ….. ಕೇಳಿಸಲಿಲ್ಲ ಮತ್ತೆ ಸ್ವಲ್ಪ ಗಟ್ಟಿಯಾಗಿ ಕೂಗಿದೆ ಊಹೂ ಇಲ್ಲ! ಪುಸ್ತಕ ಗಟ್ಟಿಯಾಗಿ ಹಿಡಿದಿದೆ ಅಜ್ಜಿ. ಬಾಗಿದ ತಲೆ, ಭಾಗಶಃ ಮುಚ್ಚಿದ ಕಣ್ಣು, ಸ್ವಲ್ಪವೇ ತೆರೆದ ಬಾಯಿ! ಭಯವಾಯ್ತು  ಮತ್ತಷ್ಟು ಧೈರ್ಯ ತುಂಬಿಕೊಂಡು ಆಕೆಯ ಕೈ ಅಲ್ಲಾಡಿಸೋಣ ಅಂತ ನನ್ನ ಕೈ ಹತ್ತಿರಕ್ಕೆ ತೆಗೆದುಕೊಂಡು….. ಅವಳ ಮುಖ ನೋಡಿದೆ, ಏನಾಯ್ತು ಗೊತ್ತಾ? ಅಜ್ಜಿ ಬಾಯಿಂದ ನಿಧಾನ ಜೊಲ್ಲು !  ಓಹೋ ಅಜ್ಜಿ ಸತ್ತಿಲ್ಲಾ ಸಧ್ಯ ಪ್ರಾಣ ಪಕ್ಷಿ ಗೂಡಲ್ಲೇ ಇದೆ! ಇನ್ನೊಂದು ಸುತ್ತು ಸುಖವಾಗಿ ಮಲಗಿರಲಿ ಅಂತ ಜಾಗ ಖಾಲಿ ಮಾಡಿದೆ

Drugs-ಚಟ ಯಾರು great?

ಆಸ್ಟ್ರೆಲಿಯಾದಲ್ಲಿ ನಾವು ವಲಸೆ ಬಂದಾಗಿನಿಂದ ಆ ಮೊದಲು ಬಂದವರೆಲ್ಲಾ ಹೇಳುತ್ತಿದ್ದ ವಿಷಯ ಸಾರ್ವಜನಿಕ ಸ್ಠಳಗಳಲ್ಲಿ ಸಿರಿಂಜ್ ಇರತ್ತೆ ಹುಷಾರು ಮುಟ್ಟೋಕ್ಕೆ ಹೋಗ್ಬೇಡಿ, ಡೇಂಜರ್ ಅಂತ.inj

ಈ ಸಿರಿಂಜ್ ಯಾಕೆ ಎಲ್ಲಾಕಡೆ ಬಿಸಾಕ್ತಾರೆ ಅನ್ನೋದಕ್ಕಿಂತ ಯಾರು ಸಪ್ಲೈ ಮಾಡ್ತಾರೆ ಅನ್ನೋ ಒಮ್ಮೆ ಫಾರ್ಮಸಿಗೆ ಹೋಗಿದ್ದಾಗ ನಾವು ಕ್ಯೂ ನಿಂತು ಔಷಧಿ ಪಡೆಯುತ್ತಿರಲು ಕೆಲವರು ಕೌಂಟರ್ ಬಳಿ ಬಂದು ಏನೋ ಹೇಳಿ ಕೂಡಲೇ ಕಾಸು ಕೊಟ್ಟು ಒಂದು ಕವರ್ ಕಸಿದು ಹೋಗುತ್ತಿದ್ದರು. ಆಗ ಅಂಗಡಿಯವನ್ನು ನಿಧಾನವಾಗಿ ವಿಚಾರಿಸಲು ವಿಷಯ ಸ್ವಲ್ಪ ತಿಳಿಯಿತು.ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಾಹಸ ಇದು ಇಷ್ಟವಿಲ್ಲದವರು ಇಲ್ಲಿಗೇ ನಿಲ್ಲಿಸಬಹುದು ಕುತೂಹಲ ಇದ್ದವರು ಮುಂದುವರೆಸಬಹುದು.
ವಿಷಯಕ್ಕೆ ಬರೋಣ.
ಈ ದೇಶದಲ್ಲಿ Needle exchange ಕಾರ್ಯಕ್ರಮ ಒಂದನ್ನ ಹಿಂದೊಮ್ಮ 1991 ರಲ್ಲಿ ಜಾರಿಗೆ ತಂದರು.ಅದಕ್ಕೂ ಮೊದಲು ಈ ಡ್ರಗ್ಗೀಗಳು/ ಯುವಕರೂ ಕದ್ದು ಒಂದೇ ಸೂಜಿಯನ್ನು ಹಲವಾರು ಜನ ಮತ್ತೆ ಮತ್ತೆ ಬಳಸುತ್ತಿದ್ದರು. HIV, hepatitis C ನಂತಹ ಹರಡುವ ರೋಗಗಳ ನಿಯಂತ್ರಣ ಆಗಲಿ ಎನ್ನುವ ಉದ್ದೇಶ ಇಟ್ಟು, ಡ್ರಗ್ ಮಾರಾಟ ಮತ್ತು ಅದನ್ನು ತಡೆಗಟ್ಟುವ ಕಾರ್ಯಕ್ಕಿಂತ ಹೆಚ್ಚು ಹಣ ಸುರಿದು ಈ Needle exchange ಕಾರ್ಯಕ್ರಮ ಜಾರಿಯಾಯ್ತು. ಏನಪ್ಪಾ ಅದರ ಅರ್ಥ ಅಂದರೆ ಡ್ರಗ್ ಸೇವಿಸುವ ಯಾವನೇ ತಾನು ಬಳಸಿದ ಸಿರಿಂಜ್ ಈ ಸ್ಥಳಗಳಿಗೆ ತಂದು ಕೊಟ್ಟರೆ ಅದರ ಬದಲು ಹೊಸ ಸಿರಿಂಜ್ ಸಿಗುತ್ತದೆ. ಅದೂ ಅಲ್ಲದೆ ಬ್ಯಾನ್ ಆದ ಪದಾರ್ಥ ಸೇವಿಸಿ ತಲೆ ತಿರುಗಿ ಬಿದ್ದವರಿಗೆ ಅವರ ಆರೈಕೆ ಮತ್ತು ಉಪಯೋಗಿಸುವ ಬಗೆ ಎಲ್ಲವೂ ಇಲ್ಲಿ ಲಭ್ಯ. ಒಟ್ಟಿನಲ್ಲಿ ಆದ್ರೆ ಸೇಫ್ ಆಗಿ ಹಾಳಾಗಿ, ಅಲ್ಲಿ ಇಲ್ಲಿ ಬಿದ್ದು ನರಳಿ ಸಾಯುವ ಬದಲು ಇಲ್ಲಿ ಚಿಕಿತ್ಸೆ ಪಡೆಯಿರಿ, ಹರಡುವ ರೋಗ ಸಿರಿಂಜ್ ಮೂಲಕ ಹಬ್ಬದಿರಲಿ ಎನ್ನುವುದು ಮೂಲ ಉದ್ದೇಶ.ಇದು ಬಹಳ ಸಹಾಯಕ ಅಂತ ಕೆಲವರ ಹೇಳಿಕೆಯಾದರೆ ಇನ್ಕೆಲವರು ಇದು ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂಗೆ ಅಂತಾರೆ.injectingroom
ಸಂಶೋಧನಾ ಅಂಕಿ ಅಂಶದಂತೆ 1991 ರಿಂದ 2010 ರ ವರೆಗೆ ಒಟ್ಟು
• 25 ಸಾವಿರ HIV, ಕೇಸ್ ತಡೆಗಟ್ಟಲಾಗಿದೆ!
• 21 ಸಾವಿರ hepatitis C ಕೇಸ್ ತಡೆಗಟ್ಟಲಾಗಿದೆ!
• 4590 ಜನರ ಜೀವ ಉಳಿಸಲಾಗಿದೆ!
• ಮೇಲ್ಕಂಡ ಎಲ್ಲರ ಇಡೀ ಜೀವನದ ನ ಖರ್ಚು ಸುಮಾರು 2.2 ರಿಂದ 7.7 ಬಿಲಿಯನ್ ಉಳಿಸಲಾಗಿದೆ!
ಅದರಲ್ಲಿ ಎಷ್ಟು ಜನ ದೇಶಕ್ಕೆ ತೆರಿಗೆಕಟ್ಟೋರು ಉಂಟು, ಇಂಥವರಿಗೇ ಹಣ ದುಂದುವೆಚ್ಚವಾಗುತ್ತಿದೆಯೇನೋ ಅನ್ನಿಸುತ್ತದೆ. ದುಷ್ಚಟಕ್ಕೆ ಪೂರಕವಾಗಿ ಐಸ್, ಕೋಕೈನ್, ಮಾರವಾನ ಇನ್ನೂ ಅನೇಕ ಮಾದಕ ವಸ್ತುಗಳನ್ನು ದೇಶದೊಳಕ್ಕೆ ಬಾರದ ಹಾಗೆ ತಡೆಗಟ್ಟುವುದೇ ಒಂದು ದೊಡ್ಡ ಯೋಜನೆ ಯಾಗಿದೆ.ಮಧ್ಯಪಾನ ಸಿಗರೇಟ್ ಸುಲಭವಾಗಿ ಕೈಗೆಟುವಹಾಗೇ ಇಲ್ಲಿನ ಯುವಕರಿಗೆ, ಅವು ಎಲ್ಲಿ ಸಿಗುತ್ತದೆ? ಎಂಬುದನ್ನು ಕೇಳಿ ಅಚ್ಚರಿಯಾಯಿತು. ಅದಷ್ಟು ಸಲೀಸು! ಆದರೂ ಇವ್ಯಾವುದೇ ಅರಿವಿಲ್ಲದೆ ಇರುವವರು ಕೆಲವರಿದ್ದರೆ, ಎಲ್ಲಾ ತಿಳಿದೂ ಹುಷಾರಾಗಿ ಕದ್ದು ರುಚಿ ನೋಡುವವರೂ ಇದ್ದಾರೆ, ಹಾಗೇ ತಮ್ಮ ಹುಷಾರಲ್ಲಿ ತಾವಿದ್ದು ಏನನ್ನೂ ಸೇವಿಸದ ಮಕ್ಕಳೂ ಇದ್ದಾರೆ. ಮಾನ್ಯ ಹಿರಣ್ಣಯ್ಯನವ ತಮ್ಮ ನಾಟಕದಲ್ಲಿ ಹೇಳುವಂತೆ ಆಗಿನ ಕಾಲದಲ್ಲಿ ಎಲ್ಲಾ ಊರ ಹೊರಗೆ ಸಿಗ್ತಿತ್ತು ಬಿಡಿ ಆಗ ಯಾವ ಚಟಾನೂ ಇಲ್ಲ ಅನ್ನೋದು ದೊಡ್ಡಗಾರಿಕೆ ಅಲ್ಲ ಮೂಲೆ ಮೂಲೆಯಲ್ಲೂ ಕೈಗೆಟಕುವ ಈ ಕಾಲದಲ್ಲೂ ಏನೂ ಮಾಡ್ತಿಲ್ಲ ಅನ್ನುವವರೇ ಗ್ರೇಟ್ .