ಈ ಹಿಂದಿನ ಪೋಸ್ಟಿನಲ್ಲಿ ಡಿ ವಿ ಜಿ ಅವರ ಜೀವನೋತ್ಸಾಹದ ಬಗ್ಗೆ ಪರಿಚಯಿಸಿದ್ದೆ ಈಗ ಅವರ ಮೂರು ಮುಖ್ಯವಾದ ಪ್ರಸ್ತಾಪಗಳಲ್ಲಿ ಎರಡನೇ ವಿಷಯ ಲೋಕಸ್ನೇಹದ ಬಗ್ಗೆ ಎರಡು ಮಾತು.
ಈ ಲೋಕದಲ್ಲಿ ಏನಾದರೂ ನಡೆಯಬೇಕಾದರೆ ಹಣವೊಂದಿದ್ದರೆ ಸಾಧ್ಯವೇ?ಇಲ್ಲ. ಒಳ್ಳೆಯ ಧರ್ಮ, ಜ್ಞಾನ, ಅದನ್ನು ಬಳಸುವ ಬುದ್ಧಿ, ಅವೆಲ್ಲಕ್ಕಿಂತ ಮಿಗಿಲಾಗಿ ಮುಖ್ಯ ಜನಬಲವೂ ಬೇಕು. ಉತ್ತಮ ಕೆಲಸಕ್ಕೆ ಜನಮನ ಒಂದಾಗಬೇಕಾದರೆ ಲೋಕಸ್ನೇಹದ ಅರಿವು ಮೂಡಬೇಕು.
ಈ ಸ್ನೇಹ ಅನ್ನುವ ಬಂಧವೇ ಚೆನ್ನ. ಆಪ್ತ ಸ್ನೇಹ, ಪ್ರಾಣಸ್ನೇಹಿತರು, ಗಳಸ್ಯ ಕಂಠಸ್ಯ, ಚಡ್ಡಿ ದೋಸ್ತ್, ಫ಼್ರೆಂಡ್ಸ್, ಹಲೋ ಹಲೋ ಸ್ನೇಹ ಹೀಗೇ ಹಲವು. ಆದರೆ ಲೋಕಸ್ನೇಹ ಅವೆಲ್ಲಕ್ಕೂ ಮೀರಿದ್ದು ಅಥವಾ ವಿಭಿನ್ನ ಅನ್ನಬಹುದು. ರೂಢಿಗೆ ರಸ್ತೆಯಲ್ಲಿ ಶಾಪಿಂಗ್ನಲ್ಲಿ ಸಿಕ್ಕಾಗ ಹಲೋ ಹಾಯ್, ಚೆನ್ನಾಗಿದ್ದೀರಾ? ಬನ್ನಿ ಮನೆಗೆ ಯಾವಾಗಾದ್ರೂ, ಅದು ಹೆಸರಿಗೆ ಆಹ್ವಾನ, ಕರೆದಿರಬೇಕು – ಆದರೆ ಬರಬಾರದು, ಇನ್ನು “ನೀವೂ ಬನ್ನಿ ನಮ್ಮನೆಗೆ” ಅನ್ನೋದೂ ಅದೇ ಅರ್ಥ ಆದರೆ ಪಾಪ “ವೀಕೆಂಡ್ ಹೋಗೋದೇ ಗೊತ್ತಾಗಲ್ಲಾರೀ, ಸಿಕ್ಕಾಪಟ್ಟೆ busy ಕಣ್ರೀ” ಇದು ಹಲೋ ಹಾಯ್ ಸ್ನೇಹ ಅನ್ನಬಹುದು.
ಚಡ್ಡಿ ದೋಸ್ತ್ ಅನ್ನೋದು ಚಿಕ್ಕವರಾಗಿದ್ದಾಗಿಂದಾ ಸ್ನೇಹಿತರು ಅನ್ನುವುದಕ್ಕಿಂತ ಆಗ್ಲಿಂದಲೂ ಪರಿಚಯ ಇರೋರು, ಇದರಲ್ಲಿ ಸ್ನೇಹ ಅತಿ ಇಲ್ಲದಿದ್ದರೂ ಹಳೇಯ ವಿಷಯ ಮೆಲಕು ಹಾಕೊಕ್ಕೆ ಒಳ್ಳೆ ಅವಕಾಶ. ಇನ್ನು ಫ್ರೆಂಡ್ಸ್ – ಅದಕ್ಕೆ ಅರ್ಥವೇ ಇಲ್ಲ ಅನ್ನಿ, ಮಾತಾಡುವಾಗ ಬೇರೆ ಯಾರದ್ದೋ ಹೆಸರು ಕೇಳಿ ಬಂದ್ರೆ “ಓ ಅವ್ರಾ ನಮಗೆ ತುಂಬಾ ಗೊತ್ತು(ಫ್ರೆಂಡ್ಸ್) ಬಿಡಿ”, “ನಾವೆಲ್ಲಾ ಹುಟ್ಟಿ ಬೆಳೆದದ್ದು ಒಂದೇ ಊರು” (ಕಂಡವರಿಗೆಲ್ಲಾ ಒಂದೇ ಮಂತ್ರ) ಹೆಸರಿಗೆ ಫ್ರೆಂಡ್ಸ್, ಸೇರಿದಾಗ ಬೇರೆಯವರ ವಿಷಯವೇ ಮುಖ್ಯ ಟಾಪಿಕ್.ಇನ್ನು ಗಳಸ್ಯ ಕಂಠಸ್ಯ – ಪರಿಚಯಿಸುವಾಗ ಇವರು ನಮಗೆ ಗಳಸ್ಯ ಕಂಠಸ್ಯ ಅನ್ನೋರು ಅತೀ ಕಡಿಮೆ, ಅವರಿಬ್ಬರೂ “ಗಳಸ್ಯ ಕಂಠಸ್ಯ” ಅಥವಾ ಏನ್ “ಗಳಸ್ಯ ಕಂಠಸ್ಯ” ಇದ್ದಂಗೆ ಇದ್ದೋರು ಅವರು, ಏನಾಯ್ತೊ ಈಗ? ಅನ್ನೋದು ಸಾಮಾನ್ಯ ಕೇಳಿಬರೋ ನುಡಿ. ಆಪ್ತಸ್ನೇಹ – ಇದು ಎಲ್ಲರನ್ನೂ ಜರಡಿ ಹಿಡಿದು ಕಡೇಯಲ್ಲಿ ಉಳಿಯುವರು, ಒಬ್ಬರೊನ್ನೊಬ್ಬರು ಬೈದಾಡಿದರೂ ಉಭಯ ವ್ಯಕ್ತಿ ಅಂತರಂಗವ ಅರಿತವರು “ಏ ಅವನು ಅಂಥವನಲ್ಲ/ಳಲ್ಲ ನಾನು ಚೆನ್ನಾಗಿ ಬಲ್ಲೆ” ಎಂದು ಸಾಧಿಸಿ ಸಾಥ್ ನೀಡುವವರು, ಸಂತೋಷ ದುಃಖ ಬಂದಾಗ ಮನಬಿಚ್ಚಿ ಹೇಳಿಕೊಳ್ಳುವುದು ಆಪ್ತರಲ್ಲಿ ಮಾತ್ರ ಸಾವಿರಕ್ಕೆ ಒಬ್ಬರೋ ಇಬ್ಬರೇ ಸಿಗಬಹುದು ಅಥವಾ ಸಿಕ್ಕಿರಬಹುದು.ಇನ್ನು ಪ್ರಾಣ ಸ್ನೇಹಿತರು ಅನ್ನೋದು ಅದೇ ಅರ್ಥ ಕೊಟ್ಟರೂ ಪ್ರತ್ಯಕ್ಷವಾಗಿ ಎಂಥಾ ನೋವಿನಲ್ಲೂ ಸ್ನೇಹ ಕೈಬಿಡದವರು,ತನು ಮನ ಧನ ಎಲ್ಲಾ ಹಂಚಿಕೊಳ್ಳುವರು. ರಾಮಾಯಣದಂಥಾ ಕಥೆಯಲ್ಲಿ ರಾಮ-ಹನುಮರ ಸ್ನೇಹ ಇದಕ್ಕೂ ಮೀರಿದ್ದು ಅನ್ನಬಹುದು, ಅಲ್ಲಿ ಸ್ನೇಹ ಸ್ವಾಮಿನಿಷ್ಟೆಗೆ ತಿರುಗಿಬಿಡುತ್ತದೆ.ಆದರೆ ರಾಮನ ಆತ್ಮೀಯತೆ ಮಾತ್ರ ನಿಶ್ಚಲ. ಸ್ನೇಹದ ಕಥೆಗಳು ಆಶ್ಚರ್ಯ ಆನಂದ ತಂದರೆ ಒಮ್ಮೆಮ್ಮೆ ಓದಿದಾಗ ಕಣ್ಣಲ್ಲಿ ಕಾವೇರಿ ಕೆನ್ನೆಯಮೇಲೆ ಹರಿಯುತ್ತಾಳೆ.
ಸ್ನೇಹ ಚಿಗುರೊಡೆಯುವುದಾದರೂ ಹೇಗೆ? ಒಮ್ಮೊಮ್ಮೆ ಒಂದೇ ಭೇಟಿಗೇ ಸ್ನೇಹ ಮೊಳೆತು ಹೆಮ್ಮರ ಆಗಬಹುದು, ಎಷ್ಟೊ ಸಲ ಮೀಟಿದ್ದರೂ ಅದ್ಯಾಕೋ ಅವರ ವಾದ ವಿವಾದವೇ ಹಿಡಿಸಲ್ಲ, ಹತ್ತಾರು ಸಲ ನೋಡಿದ್ದರೂ ಕೆಲವರಿಗೆ ಅವರ ಹೆಸರೇ ಜ್ಞಾಪಕಕ್ಕೆ ಬರೋಲ್ಲ.ಇನ್ನು ಬಸ್ಸು ಟ್ರೈನೂ ಶಾಪಿಂಗ್ ಗಳಲ್ಲಿ ಕಂಡರೂ ಕಾಣದಂತೆ ಎಲ್ಲೋ ನೋಡಿಕೊಂಡು ಹೋಗುವವರು ಹೆಚ್ಚು ಬಿಡಿ. ದಂಪತಿಗಳು ಒಬ್ಬರು ವಿಹಾರಕ್ಕೆ ಹೊರಟಿರಲು “ಯಾಕ್ರೀ ಈ ಕಡೆ ಕರ್ಕೊಂಡ್ ಬಂದ್ರೀ?”ಅಂತ ಹೆಂಡತಿ ಕೇಳಿದಾಗ ಪತಿರಾಯರು “ಅಲ್ಲಿ ನನ್ನ ಫ್ರೆಂಡ್ ಕಾಣಿಸಿದ, ಸುಮ್ನೆ ಯಾಕೆ ಬ್ಲೇಡ್ ಹಾಕ್ತಾನೆ ಅವ” ಅನ್ನೋ ಘಟನೆ ಕಣ್ಣಾರೆ ಕಂಡದ್ದೂ ಉಂಟು. ಆದರೂ ಅವನು ಫ್ರೆಂಡ್!
ಇಷ್ಟೆಲ್ಲಾ ಮೇಲಿನ ವಿವರಣೆ ನೀಡಿದ್ದು ನನ್ನನಿಸಿಕೆ ಅನುಭವಗಳು, ಇನ್ನು ವಿಷಯಕ್ಕೆ ಬಂದರೆ ಡಿ ವಿ ಜಿ ಅವರ ಲೋಕಸ್ನೇಹವನ್ನು ಮಾನ್ಯ ಗುರುರಾಜ ಕರ್ಜಗಿ ಉಪನ್ಯಾಸದಲ್ಲಿ ಉತ್ತಮ ಉದಾಹರಣೆ ಕೊಟ್ಟು ಹೇಳುತ್ತಾರೆ. ನಾನು ಮೇಲೆ ಹೇಳಿದ್ದಾನ್ನೇ ಅವರು ಬೇರೆ ರೀತಿಯಲ್ಲಿ ಪರಿಚಯಿಸಿ ಮುಂದೆ ಒಬ್ಬ ಪ್ರಖ್ಯಾತ ಫ್ರೊಫೆಸರ್ ಲಿಯೋ ಬುಸ್ಕಾಲಿಯಾ(Leo Buscaglia) ಎನ್ನುವಾತ ಅಮೇರಿಕಾದ ಭಾಷಣಕಾರನೂ ಹೌದು ಆತ ಇಂಗ್ಲೆಂಡಿಗೆ ಹೊಗಿದ್ದಾಗ ಮತ್ತೊಬ್ಬ ಪರಿಚಯವಿಲ್ಲದ ಪ್ರೊಫೆಸರನ್ನು (Brown) ಮೊದಲ ಬಾರಿ ಕಂಡು ಓಡಿ ಹೋಗಿ “ಹಲ್ಲೋ ಸಾರ್” ಎನ್ನುತ್ತಾನೆ, ಮೊದಲೆ ಬ್ರಿಟೀಶಿನವ ಆ ಫ್ರೊಫೆಸರ್ “Do I know you”ಎಂದು ಮುಖ ಮುರಿದು ಮುಂದೆ ಸಾಗುತ್ತಾನೆ. ಲಿಯೋ ಸುಮ್ಮನಾಗದೆ “but I know you sir”ಎನ್ನುತ್ತಾನೆ. ಆದರೆ ಫ್ರೊಫೆಸರ್ ಉತ್ತರ ” I don`t want to know you” ಎಂದು ನಿರ್ದಾಕ್ಷಿಣ್ಯವಾಗಿ ಬರುತ್ತದೆ. ಮರುದಿನ ಲಿಯೋ ಮತ್ತೆ ಅದೇ ಜಾಗದಲ್ಲಿ ಕಾದಿದ್ದು “Good morning sir, Its me.The same person you didnot want to meet yesterday, I think you know me now”ಎಂದು ಹಾಸ್ಯ ಮಾಡಿ ಕೈ ಕುಲುಕುವಂತೆ ಮಾಡುತ್ತಾನೆ.ಮುಂದೆ ಇಬ್ಬರೂ ಸೇರಿ Micro economics ವಿಷಯವಾಗಿ ಪ್ರಸಿದ್ಧ ಪುಸ್ತಕ ಬರೆಯುತ್ತಾರೆ. ಆತ ಬಲವಂತ ಸ್ನೇಹ ಮಾಡದೆ ಇದ್ದಿದ್ದರೆ ಅದು ಸಾಧ್ಯವಾಗುತ್ತಿತ್ತೇ?
ಲೋಕಸ್ನೇಹ ಬಯಸುವವರು ಗುಂಡಪ್ಪನವರ ಒಂದು ಕಗ್ಗವನ್ನು ಮರೆಯುವಂತಿಲ್ಲ.
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |
ಗುರುತಿಸೊಳಿತಿರುವುದನು ಕೇಡುಗಳ ನಡುವೆ ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |
ಹರುಷಕದೆ ದಾರಿಯಲೊ – ಮಂಕುತಿಮ್ಮ ||
“ಪ್ರತಿಜೀವಿಯಲ್ಲೂ ಗುರುತಿಸು ಒಳಿತಿರುವುದನು, ಕೇಡುಗಳ ನಡುವೆ” ಎನ್ನುವ ಮಾತು ಇಲ್ಲಡಗಿದ್ದರೆ, ಇದೇ ಕಗ್ಗದಲ್ಲಿ ಬೇರೆ ಅರ್ಥವನ್ನೂ ಕಾಣಬಹುದು. ಒಟ್ಟಾರೆ ಹೇಳುವುದಾದರೆ ಗೆಳೆತನಕ್ಕೆ ವಯೋಮಿತಿ, ಅಂತರ, ಜಾತಿ ಧರ್ಮದ ಕಟ್ಟುಪಾಡಿಲ್ಲ, ರಾಂಗ್ ನಂಬರ್ ಬಂದವರಿಗೂ ಹಾಸ್ಯಗಾರ Y M N ಮೂರ್ತಿ ಅರರೆ ಫೋನ್ ಇಡಬೇಡಿ ಸ್ವಲ್ಪ ತಾಳಿ! ಅಂತ ಎರಡು ಮಾತಾಡಿ, ನಗಿಸಿ ಫ಼್ರೆಂಡ್ ಆಗಿ ತಮ್ಮ ಹಾಸ್ಯ ಕಾರ್ಯಕ್ರಮಕ್ಕೆ ಆಹ್ವಾನ ಇತ್ತು ಮತ್ತೊಬ್ಬ ಪ್ರೇಕ್ಷಕನ ಸಂಖ್ಯೆ ಹೆಚ್ಚಿಸಿ ನಂತರ ಆತ್ಮೀಯರಾದ ನಿಜಸಂಗತಿ ಕೂಡಾ ಉಂಟು. ದೊಡ್ಡ ಉದ್ಯಮಿಗಳು ಸ್ನೇಹದಿಂದ ಹೆಮ್ಮರವಾಗಿರುವ ಸುದ್ದಿಯನ್ನೂ ಕೇಳಿದ್ದೇವೆ. ಸ್ನೇಹ ಬಯಸುವವರು ಹಗ್ಗವನ್ನು ಪ್ರತಿವ್ಯಕ್ತಿಗೆ ಎಸೆಯುತ್ತಿರಬೇಕು, ಎಂದಿಗಾದರೂ ಸಫಲ ಆಗುವುದು ಖಂಡಿತ. ಅದೆಲ್ಲಾ ಹಾಗಿರಲಿ, “ಕೆಟ್ಟವನ ಸ್ನೇಹಕ್ಕಿಂತ ಒಳ್ಳೆಯವರ ಬಳಿ ಕಾದಾಡುವುದೇ ಲೇಸು” ಎನ್ನುವ ಗಾದೆ ಮರೆಯಲಾಗುವುದೇ.
A friend in need is a friend indeed. ಈ ನಾಣ್ನುಡಿ ನಿಮ್ಮ ಲೇಖನದಿಂದ ಸಾಬೀತಾಗಿದೆ. ಸ್ನೇಹಕ್ಕಿಂತ ದೊಡ್ಡದಿಲ್ಲ ಎಂಬುದು ಬಹು ಸುಂದರವಾಗಿ ವಿವರಿಸಿದ್ದೀರ . ತಂದೆ ಮಕ್ಕಳಲ್ಲಿ ಸ್ನೇಹ , ದಂಪತಿಗಳಲ್ಲಿ ಸ್ನೇಹ , ಗುರು ಶಿಷ್ಯರ ಸ್ನೇಹ , ಬಾಸ್ ಜೊತೆ ಸ್ನೇಹ , ಸ್ನೇಹಕ್ಕೆ ಬೆಲೆ ಕಟ್ಟಲಾಗದು. ಸ್ನೇಹ ಯಾವಾಗಲೋ ಪರಿ ಶುದ್ದ ಮತ್ತು ಚಿರನೂತನ!!
ಹೌದು ಸ್ಮಿತಾ ಅವರೆ, ತಮ್ಮ ಮಾತು ನಿಜ. ಆದರೂ ಕೆಲವು ಸಂಬಂಧಿಕರಲ್ಲಿ ಪ್ರೀತಿ,ವಾತ್ಸಲ್ಯ,ಮಮತೆ, ಸ್ನೇಹಕ್ಕೆ ತಿರುಗುವುದೂ ಉಂಟು.
ಸ್ನೇಹದ ನಾನಾ ನಮೂನೆಯ ಪರಿಚಯ ಮಾಡಿಸಿ, ಲೋಕ ಸ್ನೇಹದ ಮಹತ್ವವನ್ನು ಈ ಬರಹ ತಿಳಿಸುತ್ತದೆ. ನಿಜ, ಸ್ನೇಹ ಹಲವಾರು ರೂಪಗಳನ್ನು ಪಡೆಯುವ ಒಂದು ಬಾಂಧವ್ಯ. ಈ ನಿಮ್ಮ ಲೇಖನ ಹೈಸ್ಚೂಲ್ ನಲ್ಲಿ ಕಲಿತ ಒಂದು ಸುಭಾಷಿತದ ನೆನಪು ತಂದಿತು. ಒಳ್ಳೆಯ ಸ್ನೇಹ (ಅಥವಾ ಮಿತ್ರತ್ವ) ದ ಲಕ್ಷಣ ಬರ್ತೃಹರಿಯ ಈ ನೀತಿಯಲ್ಲಿದೆ.
ಪಾಪಾನ್ನಿವಾರಯತಿ ಯೋಜಯತೇ ಹಿತಾಯ ಗುಹ್ಯಂ ನಿಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ, ಸನ್ಮಿತ್ರ ಲಕ್ಷಣಮಿದಂ ಪ್ರವದಂತಿ ಸಂತ: ||
ಅಂದರೆ,
ಬಲ್ಲವರು ಹೇಳುವ ಪ್ರಕಾರ ಒಬ್ಬ ಒಳ್ಳೆಯ ಮಿತ್ರ ನಿಮ್ಮನ್ನು ಪಾಪ ಕಾರ್ಯದಿಂದ ತಪ್ಪಿಸುತ್ತಾನೆ. ನಿಮ್ಮ ಹಿತಕ್ಕಾಗಿ ಯೋಜನೆ ಮಾಡುತ್ತಾನೆ . ಯಾವುದನ್ನು ಮುಚ್ಚಿಡಬೇಕೋ ಆದನ್ನು ಮುಚ್ಚಿಡುತ್ತಾನೆ. ನಿಮ್ಮ ಸದ್ಗುಣಗಳನ್ನು ಬಹಿರಂಗಪಡಿಸುತ್ತಾನೆ. ಮತ್ತು ಸಂಕಟ ಬಂದ ಸಮಯದಲ್ಲಿ ಕೈ ಬಿಡದೆ ಸಕಾಲಕ್ಕೆ ಸಹಾಯ ಮಾಡುತ್ತಾನೆ.
ನೀವು ಲೇಖನದಲ್ಲಿ ಹೇಳಿದಂತೆ ಅಂತಹ ಮಿತ್ರರು ಸಿಗುವುದು ಬಹಳ ಕಮ್ಮಿ. ಸಿಕ್ಕವರು ನಿಜಕ್ಕೂ ಅದೃಷ್ಟವಂತರು. ಒಂದು ಒಳ್ಳೆ ಸಮಾಜದ ನಿರ್ಮಾಣಕ್ಕೆ ಇಂತಹ ಒಳ್ಳೆ ಮಿತ್ರರ ದಂಡು ಹೆಚ್ಚಬೇಕು. ಅದಕ್ಕಾಗಿ ಮೊದಲು ನಾವು ಮತೊಬ್ಬರಿಗೆ ಒಳ್ಳೆಯ ಮಿತ್ರರಾಗಬೇಕು ಅಲ್ಲವೇ!
ನಿಮ್ಮ ಸಾಹಿತ್ಯ ಕೃಷಿಯಲ್ಲಿ ಬಂದ ಒಂದು ವಿಭಿನ್ನ ಉತ್ಪನ್ನ ಈ ಬರಹ. ಮೆಚ್ಚುಗೆಗಳು …
Very nice article Narayan. As Shakespeare quotes ‘friend is the one who knows you as you are,understand where you have been ,accepts what you have become and still gently allows you to grow’
Thanks for your feedbacks Shanthala madam.
ಬದರಿ, ತಾವು ಇಷ್ಟು ಬಿಡುವು ಮಾಡಿಕೊಂಡು ಲೇಖನದ ಬಗ್ಗೆ ಬರೆದಿದ್ದು ನನಗೆ ತುಂಬಾ ಖುಷಿಯಾಯ್ತು ಸಾರ್, ನೀವು ಬರೆದಿದ್ದರೆ ಮತ್ತಷ್ಟು ಚೆನ್ನಾಗಿರುತ್ತಿತ್ತೇನೋ ಅನ್ನಿಸುತ್ತದೆ, ತಮ್ಮಂತ ಕವಿಗಳ ಮೆಚ್ಚುಗೆಗಳೇ ನಮಗೆ ಸ್ಪೂರ್ತಿ. ಕೆಲವು ತಿದ್ದುಪಡಿಮಾಡಿದ್ದೇನೆ. ಅವಸರದಲ್ಲಿ ಚೆಕ್ ಮಾಡುವುದು ಮರೆತಿದ್ದೆ.
, ನಾವು ಆಯ್ಕೆ ಮಾಡಿ ಪಡೆಯಲಾಗದಂತ ಒಂದು ಭಾಂಧವ್ಯ ಸ್ನೇಹ. ಸ್ನೇಹಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ, ಅಂತಸ್ತು, ಕುಲ, ಬಾಷೆ, ಅಷ್ಟೇ ಏಕೆ ವಯಸ್ಸಿನ ಮಿತಿಗಳೂ ಇರುವುದಿಲ್ಲ. ಒಂದು ಸ್ನೇಹ ನಮಗೆ ಪೋಷಕರಂತೆ, ಒಡಹುಟ್ಟಿದವರಂತೆ, ಗುರುವಂತೆ, ಮತ್ತು ಇನ್ನ್ಯಾವುದೇ ರೂಪದಲ್ಲಿ ಕೂಡ ದೊರೆಯುವಂತಾದಾಗ, ಅದಕ್ಕಿಂತ ಭಾಗ್ಯ ಬೇರೊಂದಿಲ್ಲ ,
ನಾರಾಯಣ,ಇಂದಿನ ಸಂಜೆಯ ಚಂದ್ರ ದರ್ಶನದ ಘಟನೆ ಸುಮಾರು ೩೦ ವರ್ಷಗಳ ಹಿಂದಿನ ನೆನಪು ಮರುಕಳಿಸುವಂತೆ ಮಾಡಿ, ನಮ್ಮ ಸ್ನೇಹ ಕಾಲಾತೀತ ಎನಿಸಿತು, ಲೇಖನದಲ್ಲಿರುವ ಉಭಯ ಅಂತರಂಗವನ್ನರಿತವರು ಎಂಬುದಕ್ಕೆ ಅದೇ ಪ್ರತ್ಯಕ್ಷ ನಿದರ್ಶನ.
ಶೈಲೇಶು ನಿಮ್ಮ ಅನಿಸಿಕೆ ಮತ್ತು ಹೇಳಿಕೆ ಹೃದಯದ ಕದತಟ್ಟಿದಂತಿದೆ,ಧನ್ಯವಾದಗಳು. ತಮ್ಮಂತೆ ಸರಿಯಾದ ಸಾಹಿತ್ಯ ಓದಿದ್ದರೆ ಇನ್ನೂ ಸುಂದರವಾಗಿ ಬರೆಯಬಹುದಿತ್ತೇನೋ ಅನ್ನಿಸುತ್ತದೆ.